ಬೆಂಗಳೂರು: ಜ.28 ರಂದು ದಲಿತ ಸಂಘರ್ಷ ಸಮಿತಿ ಬೃಹತ್ ಜಾಥಾ
ಭೂ ಸುಧಾರಣಾ ಕಾಯ್ದೆಯ ಹಕ್ಕುಪತ್ರ ವಿತರಣೆಗೆ ವಿಳಂಬ ಆರೋಪ
ಬೆಂಗಳೂರು, ಜ.23: ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಹಕ್ಕುಪತ್ರಗಳನ್ನು ವಿತರಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಜ.28 ರಂದು ಪುರಭವನದಿಂದ ಸ್ವಾತಂತ್ರ ಉದ್ಯಾನದವರೆಗೂ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಮಾರಪ್ಪ, ಜಾಥದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಡಾ.ಸಿ.ಎಸ್.ದ್ವಾರಕಾನಾಥ್, ಜ್ಞಾನಪ್ರಕಾಶ್ ಸ್ವಾಮೀಜಿ, ಚಂದ್ರಶೇಖರ ಪಾಟೀಲ್, ಪ್ರಗತಿಪರ ಚಿಂತಕರು ಹಾಗೂ ಸಾಹಿತಿಗಳು ಸೇರಿದಂತೆ 2 ಸಾವಿರ ಸಕ್ರಿಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಯಲಹಂಕ ತಾಲೂಕು, ಹೋಬಳಿ, ಕೋಗಿಲು ಬಡಾವಣೆಯ ಸರ್ವೆ ನಂ. 99ರಲ್ಲಿ ಪಕೀರ್ ಬಡಾವಣೆ, ಜಯಭೀಮ್ ನಗರದಲ್ಲಿ ಸುಮಾರು 30 ವರ್ಷಗಳಿಂದ 170ಕ್ಕೂ ಹೆಚ್ಚು ದಲಿತ ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದು, 94 ಸಿಸಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಸರಕಾರವು ಸದರಿ ನಿವೇಶನಗಳನ್ನು ಸಕ್ರಮಗೊಳಿಸುವುದರೊಂದಿಗೆ ಹಕ್ಕು ಪತ್ರಗಳನ್ನು ವಿತರಿಸಬೇಕೆಂದು ಒತ್ತಾಯಿಸಿದರು.