ರೌಡಿಗಳ ಮನೆ ಮೇಲೆ ಪೊಲೀಸರ ದಿಢೀರ್ ದಾಳಿ
ಬೆಂಗಳೂರು, ಜ.25: ದಕ್ಷಿಣ ವಿಭಾಗದ ಸುಬ್ರಹ್ಮಣ್ಯಪುರ ಉಪವಿಭಾಗದ ಐದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿಗಳು ಹಾಗೂ ಹಳೆ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದರು.
ಡಿಸಿಪಿ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ಎಸಿಪಿ ಮಹದೇವ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯಪುರ, ಪುಟ್ಟೇನಹಳ್ಳಿ, ಕೆಎಸ್ ಲೇಔಟ್, ಕೋಣನಕುಂಟೆ ಹಾಗೂ ತಲಘಟ್ಟಪುರ ಠಾಣೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯಾ ಠಾಣಾ ವ್ಯಾಪ್ತಿಯಲ್ಲಿನ ರೌಡಿಗಳು ಹಾಗೂ ಹಳೆ ಆರೋಪಿಗಳ ಮನೆಗೆ ತೆರಳಿ ಪರಿಶೀಲಿಸಿದರು.
ಶುಕ್ರವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿದ ಪೊಲೀಸರು, 24 ರೌಡಿಗಳು ಹಾಗೂ 36 ಹಳೆ ಆರೋಪಿಗಳನ್ನು ಆಯಾ ಠಾಣೆಗೆ ಕರೆತಂದು ಪ್ರಸ್ತುತ ಮಾಡುತ್ತಿರುವ ಉದ್ಯೋಗ, ಖಾಯಂ ವಿಳಾಸ, ಮೊಬೈಲ್ ಸಂಖ್ಯೆ ಇನ್ನಿತರೆ ಮಾಹಿತಿಗಳನ್ನು ಪೊಲೀಸರು ಪಡೆದುಕೊಂಡರು.
ದಾಳಿ ಸಂದರ್ಭದಲ್ಲಿ 71 ದ್ವಿಚಕ್ರ ವಾಹನಗಳನ್ನು ಪತ್ತೆಹಚ್ಚಿರುವ ಪೊಲೀಸರು ಇವುಗಳ ಪೈಕಿ ಕೆಲವು ಬೈಕ್ಗಳಿಗೆ ಸೂಕ್ತ ದಾಖಲಾತಿ ಇಲ್ಲದೆ ಇರುವುದು ಕಂಡು ಬಂದ ಹಿನ್ನೆಲೆ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.