ಇಂದು ಹಸಿರು ಮಾರ್ಗದಲ್ಲಿ ಆರು ಬೋಗಿಗಳ ಮೆಟ್ರೋಗೆ ಚಾಲನೆ
ಬೆಂಗಳೂರು, ಜ.27: ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ (ನಾಗಸಂದ್ರ-ಯಲಚೇನಹಳ್ಳಿ) ಆರು ಬೋಗಿಗಳ ರೈಲು ಇಂದಿನಿಂದ ಕಾರ್ಯಾಚರಣೆ ಮಾಡಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೀಡಲಿದ್ದಾರೆ.
ಮೈಸೂರು ರಸ್ತೆ-ಬೈಯಪ್ಪನಹಳ್ಳಿಯ ನೇರಳೆ ಮಾರ್ಗದಲ್ಲಿ ಈಗಾಗಲೇ ಮೂರು ಆರು ಬೋಗಿಗಳ ರೈಲುಗಳು ಸಂಚಾರ ಮಾಡುತ್ತಿವೆ. ಅದರ ಜತೆಗೆ ಇನ್ನೂ ಎರಡು ರೈಲುಗಳು ಇಂದಿನಿಂದ ಸೇರ್ಪಡೆಯಾಗಲಿವೆ. ಇದು ಸೇರಿದಂತೆ ನೇರಳೆ ಮಾರ್ಗದಲ್ಲಿ ಒಟ್ಟು ಐದು ರೈಲುಗಳು ಸಂಚಾರ ಮಾಡಲಿವೆ.
ಇನ್ನು ಹಸಿರು ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಆರು ಬೋಗಿಗಳ ಮೊದಲ ರೈಲಿಗೆ ಇಂದಿನಿಂದ ಚಾಲನೆ ದೊರೆಯಲಿದೆ. ನೇರಳೆ ಮಾರ್ಗದಲ್ಲಿ ಈಗಾಗಲೇ ಎರಡು ಬಾರಿ ಆರು ಬೋಗಿಗಳ ರೈಲಿಗೆ ಚಾಲನೆ ನೀಡಿರುವ ಹಿನ್ನೆಲೆಯಲ್ಲಿ ಹಸಿರು ಮಾರ್ಗದಲ್ಲಿನ ರೈಲಿಗೆ ಅಷ್ಟೇ ಚಾಲನೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
132 ಬೋಗಿಗಳು ಬಾಕಿ
ಬಿಎಂಆರ್ಸಿಎಲ್ 2019 ರ ಅಂತ್ಯಕ್ಕೆ ಎಲ್ಲ 150 ಬೋಗಿಗಳನ್ನು ಪೂರೈಸಲಾಗುತ್ತದೆ ಎಂದು ಹೇಳಲಾಗಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಎಲ್ಲ ಬೋಗಿಗಳನ್ನು ಹಸ್ತಾಂತರಿಸಲು ಯತ್ನಿಸಿ ಎಂದು ಬಿಎಂಆರ್ಸಿಎಲ್ ಕೋರಿದ್ದು, ಇನ್ನೂ 132 ಬೋಗಿಗಳು ಬಾಕಿಯಿದೆ. ಇದೀಗ ಕೇವಲ 18 ಬೋಗಿಗಳನ್ನಷ್ಟೇ ನೀಡಲಾಗಿದೆ.