ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಿ: ಸಿ.ಎನ್.ಆನಂದ್
ಬೆಂಗಳೂರು, ಜ.30: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳಲ್ಲೂ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸುವಂತೆ ಮ್ಯಾನುಯಲ್ ಸ್ಕಾವೆಂಜರ್ಸ್ ವೃತ್ತಿ ಹಾಗೂ ಕೆಲಸ ನಿಷೇಧ ಮತ್ತು ಪುನರ್ವಸತಿ ಸಂಬಂಧ ಜಿಲ್ಲಾ ಮಟ್ಟದಲ್ಲಿ ರಚಿಸಿರುವ ಉಸ್ತುವಾರಿ ಸಮಿತಿಯ ಸದಸ್ಯ ಸಿ.ಎನ್.ಆನಂದ್ ಆಗ್ರಹಿಸಿದ್ದಾರೆ.
ಮುಂಜಾನೆ ಪೌರ ಕಾರ್ಮಿಕರಿಗೆ ಹಾಜರಾತಿ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆಯಿಟ್ಟಿದ್ದ ಹಿನ್ನೆಲೆ, ಮಹಿಳಾ ಆಯೋಗ ಮತ್ತು ಸಫಾಯಿ ಕರ್ಮಚಾರಿ ಆಯೋಗ ಮೂಲಸೌಕರ್ಯ ಒದಗಿಸುವಂತೆ ಬಿಬಿಎಂಪಿಗೆ ಸೂಚಿಸಿತ್ತು.
ಇದರ ಅನ್ವಯ 2017ನೇ ಸಾಲಿನಲ್ಲಿ ಮಾರಪ್ಪನ ಪಾಳ್ಯ ವಾರ್ಡ್ 44ರಲ್ಲಿ ಪೌರಕಾರ್ಮಿಕರಿಗೆ ಊಟದ ಕೊಠಡಿ, ಶೌಚಾಲಯ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ, ಈ ರೀತಿಯ ಸೌಲಭ್ಯಗಳನ್ನು ಬಿಬಿಎಂಪಿಯ 197 ವಾರ್ಡ್ಗಳಿಗೂ ವಿಸ್ತರಿಸಬೇಕು ಎಂದು ಆನಂದ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
Next Story