ಕಳವು ಪ್ರಕರಣ: ಇಬ್ಬರ ಸೆರೆ
ಬೆಂಗಳೂರು, ಜ.30: ಕಳವು ಪ್ರಕರಣ ಸಂಬಂಧ ಇಲ್ಲಿನ ವಿದ್ಯಾರಣ್ಯಪುರ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಮುಹಮ್ಮದ್ ಅಲಿ(23), ಸೈಯದ್ ಹುಸೈನ್(37) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನ ಸಿಂಗಾಪುರ ವ್ಯಾಪ್ತಿಯ ನಿವಾಸಿ ವಿಜಯಲಕ್ಷೀ ತಮ್ಮ ಮನೆಯ ಮುಂದೆ ನಡೆದುಕೊಂಡು ಬರುತ್ತಿದ್ದಾಗ ಆಕೆಯ ಕೊರಳಿನಲ್ಲಿದ್ದ ಸುಮಾರು 30 ಗ್ರಾಂ ತೂಕದ ಸರವನ್ನು ಬೈಕಿನಲ್ಲಿ ಬಂದ ಈ ಇಬ್ಬರು ದುಷ್ಕರ್ಮಿಗಳು ಕಸಿದುಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.
ಈ ಸಂಬಂಧ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಂಜಯ ನಗರದಲ್ಲಿ 5 ಪ್ರಕರಣ, ಬಾಣಸವಾಡಿಯಲ್ಲಿ 2, ಆರ್ಟಿನಗರದಲ್ಲಿ 3, ಸದಾಶಿವನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ದುಬಾರಿ ಬೈಕ್ನಲ್ಲಿ ಬಂದು ಮಹಿಳೆಯರ ಮತ್ತು ವೃದ್ಧರ ಕೊರಳಿನಿಂದ ಚಿನ್ನಾಭರಣಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳ ಬಂಧನದಿಂದ ಸುಮಾರು 20 ಪ್ರಕರಣ ಪತ್ತೆ ಹಚ್ಚಿ, ಬಂಧಿತ ಆರೋಪಿಗಳಿಂದ 15 ಲಕ್ಷ ಬೆಲೆಬಾಳುವ ಚಿನ್ನದ ಸರಗಳು ಹಾಗೂ ಒಂದು ದುಬಾರಿ ಬೈಕ್ ವಶಪಡಿಸಿಕೊಳ್ಳಲಾಗಿದೆ.