ವಕ್ಫ್ ಬೋರ್ಡ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುನೀರ್ ಅಹ್ಮದ್ ನಿವೃತಿ
ಬೆಂಗಳೂರು, ಫೆ. 3: ರಾಜ್ಯ ವಕ್ಪ್ ಬೋರ್ಡ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುನೀರ್ ಅಹ್ಮದ್ ಜ.31ರಂದು ನಿವೃತ್ತಿ ಹೊಂದಿದರು. ಬಿಎಸ್ಸಿ, ಎಲ್ಎಲ್ಬಿ ಪದವೀಧರರಾಗಿರುವ ಮುನೀರ್ ಅಹ್ಮದ್ 1978ರ ಡಿಸೆಂಬರ್ 30ರಂದು ವಕ್ಫ್ ಬೋರ್ಡ್ನಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಸುದೀರ್ಘ 40 ವರ್ಷಗಳ ಸೇವೆಯ ಬಳಿಕ ಅವರು ನಿವೃತ್ತರಾದರು.
ತಮ್ಮ ಅಧಿಕಾರವಧಿಯಲ್ಲಿ ವಕ್ಫ್ ಬೋರ್ಡ್ನ ವಿಭಾಗೀಯ ಸಂಪರ್ಕ ಅಧಿಕಾರಿ, ವಕ್ಫ್ ನ್ಯಾಯ ಮಂಡಳಿಯ ಶಿರಸ್ತೇದಾರ್, ಶಿವಮೊಗ್ಗ ಜಿಲ್ಲೆಯ ವಕ್ಫ್ ಅಧಿಕಾರಿ, ವಕ್ಫ್ ಬೋರ್ಡ್ನ ಸಹಾಯಕ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ವಂಶಿ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರಕಾರದಿಂದ ನೋಡಲ್ ಅಧಿಕಾರಿಯಾಗಿಯೂ ನೇಮಿಸಲ್ಪಟ್ಟಿದ್ದರು. ಪ್ರಮುಖವಾದ ವಕ್ಫ್ ಸಂಸ್ಥೆಗಳ ಚುನಾವಣಾ ಅಧಿಕಾರಿಯಾಗಿ, ಆಡಳಿತಾಧಿಕಾರಿಯಾಗಿಯು ಕರ್ತವ್ಯ ನಿರ್ವಹಿಸಿದ್ದಾರೆ.
2000 ಇಸವಿಯಲ್ಲಿ ಖಾದಿಮುಲ್ ಹುಜ್ಜಾಜ್, ಶಿರಸ್ತೇದಾರ್ ಆಗಿ ನೇಮಿಸಲ್ಪಟ್ಟಿದ್ದ ಮೊದಲ ವಕ್ಫ್ ಬೋರ್ಡ್ ಸಿಬ್ಬಂದಿ ಇವರಾಗಿದ್ದರು. ಪ್ರಸ್ತುತ ಶಿವಾಜಿನಗರದಲ್ಲಿರುವ ಗುಲಿಸ್ತಾನ್ ಶಾದಿ ಮಹಲ್ ನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.