ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಬೆಂಗಳೂರು, ಫೆ.5: ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಶೌಚಾಲಯದಲ್ಲಿ ಯುವತಿಯೊಬ್ಬಾಕೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮೇರಿ ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ ಎಂದು ತಿಳಿದುಬಂದಿದೆ.
ಪ್ರಕಾಶ್ ಎಂಬಾತ ಮೇರಿ ಅನ್ನು ಮದುವೆ ಆಗುವುದಾಗಿ ನಂಬಿಸಿ, ಮೋಸ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಸಂತ್ರಸ್ತೆ, ಆಯುಕ್ತರ ಕಚೇರಿ ಆವರಣದಲ್ಲಿರುವ ವನಿತಾ ಸಹಾಯವಾಣಿಯ ಮೊರೆ ಹೋಗಿದ್ದಳು ಎನ್ನಲಾಗಿದೆ.
ಮಂಗಳವಾರ ವನಿತಾ ಸಹಾಯವಾಣಿ ಕೇಂದ್ರದ ಕೌನ್ಸಿಲಿಂಗ್ ಹೋಗುವ ಮುನ್ನ ಪ್ರಕಾಶ್ ಮದುವೆ ಆಗುವುದಿಲ್ಲ ಎಂದಿದ್ದಾನೆ. ಇದರಿಂದ ನೊಂದು ಯುವತಿ ಆಯುಕ್ತರ ಕಚೇರಿಯ ಶೌಚಾಲಯಕ್ಕೆ ಹೋಗಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.
ಸದ್ಯ ವನಿತಾ ಸಹಾಯವಾಣಿ ಸಿಬ್ಬಂದಿ ಯುವತಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
Next Story