ಕಾಂಗ್ರೆಸ್ ಬಿಟ್ಟು ಹೋಗಲ್ಲ: ಶಾಸಕ ಉಮೇಶ್ ಜಾಧವ್
ಬೆಂಗಳೂರು, ಫೆ. 13: ನಾನು ಪಕ್ಷದಲ್ಲೇ ಇರ್ತೇನೆ, ಕಾಂಗ್ರೆಸ್ ಬಿಟ್ಟು ಹೋಗಲ್ಲ. ಇವತ್ತು ಮತದಾನ ಹಾಗಾಗಿ ಬಂದೆ. ನನ್ನ ವೈಯಕ್ತಿಕ ಕಾರಣಕ್ಕಾಗಿ ಸಿಎಲ್ ಪಿ ಸಭೆಗೆ ಬಂದಿರಲಿಲ್ಲ. ನಾನು ರಾಜೀನಾಮೆ ಕೊಡೋದಿಲ್ಲ ಎಂದು ಶಾಸಕ ಉಮೇಶ್ ಜಾಧವ್ ತಿಳಿಸಿದ್ದಾರೆ.
ಅವರು ಪತ್ರಕರ್ತರ ಜೊತೆ ಮಾತನಾಡುತ್ತಾ ಈ ಬಗ್ಗೆ ಹೇಳಿಕೆ ನೀಡಿದರು.
ಸಿಎಲ್ ಪಿ ನಾಯಕರಿಗೆ ನನ್ನ ಗೈರಿನ ಬಗ್ಗೆ ಕಾರಣ ಕೊಟ್ಟಿದ್ದೇನೆ. ನನ್ನ ಸ್ಪಷ್ಟನೆಯಲ್ಲಿ ತಪ್ಪು ಇದ್ದಲ್ಲಿ ಕ್ರಮಕೈಗೊಳ್ಳಲಿ. ಸ್ಥಳೀಯವಾಗಿ ನನ್ನ ಕ್ಷೇತ್ರದಲ್ಲಿ ಸಮಸ್ಯೆಗಳಿವೆ. ಅದನ್ನು ನಮ್ಮ ನಾಯಕರಿಗೆ ಮನವರಿಕೆ ಮಾಡಿದ್ದೇನೆ ಎಂದು ಹೇಳಿದರು.
ನಾನು ತಪ್ಪು ಮಾಡಿಲ್ಲ, ಸಿದ್ದರಾಮಯ್ಯ ನನ್ನ ನಾಯಕ. ನಾನು ಯಾರನ್ನೂ ಭೇಟಿ ಆಗಿಲ್ಲ. ಬಿಜೆಪಿಯಲ್ಲೂ ನನ್ನ ಗೆಳೆಯರಿದ್ದಾರೆ. ಹಾಗಾಗಿ ಸಂಪರ್ಕದಲ್ಲಿ ಇರದೇ ಇರಕ್ಕಾಗುತ್ತಾ ? ನಾನು ಮುಂಬೈಗೆ ಹೋಗಿರಲಿಲ್ಲ. ಸರ್ಕಾರ ಬೀಳಿಸುವ ವಿಚಾರ ನಾನು ಮಾಡಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನನ್ನ ಕ್ಷೇತ್ರದ ಮತದಾರರಿಗೆ ನಾನು ಸಚಿವನಾಗುವ ಒತ್ತಾಯ ಇದೆ ಎಂದು ಶಾಸಕ ಉಮೇಶ್ ಜಾಧವ್ ತಿಳಿಸಿದ್ದಾರೆ.