ಲಂಚ ಆರೋಪ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿಗೆ ಎಸಿಬಿ ನೋಟಿಸ್
ಬೆಂಗಳೂರು, ಫೆ.14: ವಿಧಾನಸೌಧದಲ್ಲಿ ನಗದು ಪತ್ತೆ ಪ್ರರಕಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ನೋಟಿಸ್ ಜಾರಿ ಮಾಡಿದೆ.
ಇತ್ತೀಚಿಗಷ್ಟೇ, ಎಸಿಬಿ ಅಧಿಕಾರಿಗಳು, ಸಚಿವರ ಕಚೇರಿಯ ಟೈಪಿಸ್ಟ್ ಮೋಹನ್ಕುಮಾರ್ ಹಾಗೂ ಮಾಜಿ ಪಿಎಗಳಾದ ಮಂಜುನಾಥ್ ಮತ್ತು ಕೃಷ್ಣಮೂರ್ತಿ ಅವರ ವಿಚಾರಣೆ ನಡೆಸಿದ್ದರು.
ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧವೂ ಆರೋಪ ಕೇಳಿಬಂದಿದ್ದರಿಂದ ಅವರನ್ನೂ ವಿಚಾರಣೆಗೊಳಪಡಿಸಿದ್ದ ಎಸಿಬಿ ಅಧಿಕಾರಿಗಳು ಇದೀಗ ಸಚಿವರ ವಿಚಾರಣೆಗೆ ನೋಟಿಸ್ ನೀಡಿದ್ದಾರೆ.
ಮೂರು ದಿನಗಳೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ನಲ್ಲಿ ಸೂಚಿಸಿದೆ. ಈಗಾಗಲೇ ಮೋಹನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
‘ಕಾಲಾವಕಾಶ ನೀಡಿ’
ವೈಯಕ್ತಿಕ ಕಾರಣದಿಂದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದೆ, ಇರುವುದರಿಂದ ಕಾಲಾವಕಾಶ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಎಸಿಬಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.