ಬಿಎಚ್ಇಎಲ್ ಮಹಿಳಾ ಉದ್ಯೋಗಿಯ ಕೊಲೆ
ಬೆಂಗಳೂರು, ಫೆ.16: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಬಿಎಚ್ಇಎಲ್ ಮಹಿಳಾ ಉದ್ಯೋಗಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸನ್ಸಿಟಿ ನಿವಾಸಿ ಅನು (32) ಕೊಲೆಯಾದ ಉದ್ಯೋಗಿ ಎಂದು ತಿಳಿದುಬಂದಿದೆ.
ಸನ್ಸಿಟಿಯಲ್ಲಿ ಒಟ್ಟು ಆರು ಮನೆಯುಳ್ಳ ಕಟ್ಟಡದ ಮೊದಲ ಮಹಡಿಯಲ್ಲಿ ಅನು ವಾಸವಿದ್ದರೆ, ಮೂರನೇ ಮಹಡಿಯಲ್ಲಿ ಇವರ ಅಕ್ಕ ವಾಸವಾಗಿದ್ದಾರೆ. ಶುಕ್ರವಾರ ರಾತ್ರಿ 8 ಗಂಟೆ ಸಮಯದಲ್ಲಿ ಅನು ಅವರು ಮನೆಯಲ್ಲಿ ಒಬ್ಬರೇ ಇದ್ದರು. ಈ ಸಂದರ್ಭದಲ್ಲಿ ನುಗ್ಗಿದ ದುಷ್ಕರ್ಮಿಗಳು ಅನು ಅವರ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾತ್ರಿ ಅನು ಅವರ ಪತಿ ಮೊಬೈಲ್ ಗೆ ಕರೆ ಮಾಡಿದಾಗ ಸ್ವೀಕರಿಸದ ಕಾರಣ ಅದೇ ಕಟ್ಟಡದ 3ನೇ ಮಹಡಿಯಲ್ಲಿರುವ ಅನು ಅವರ ಅಕ್ಕನಿಗೆ ಕರೆ ಮಾಡಿದ್ದಾರೆ.
ತಕ್ಷಣ ಅನು ಅವರ ಅಕ್ಕ ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿರುವುದು ಗಮನಿಸಿ ಸಂಬಂಧಿಕರನ್ನು ವಿಚಾರಿಸಿದರೂ ಅನು ಅವರು ಪತ್ತೆಯಾಗಲಿಲ್ಲ. ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಅನು ಕೊಲೆಯಾಗಿರುವುದು ಕಂಡು ಬಂದಿದೆ.
ತಕ್ಷಣ ಕೆಂಗೇರಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.