ಸರಣಿ ಅಪಘಾತ: 32 ಮಂದಿಗೆ ಗಾಯ
ಬೆಂಗಳೂರು, ಫೆ.17: ಖಾಸಗಿ ಬಸ್-ಲಾರಿ ಹಾಗೂ ಮಾರುತಿ ವ್ಯಾನ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ 32 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.
ರವಿವಾರ ಬೆಳಗ್ಗೆ ದಾಬಸ್ಪೇಟೆ ಬಳಿಯ ಹೆದ್ದಾರಿ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ, ಮುಂದೆ ಹೋಗುತ್ತಿದ್ದ ಜೆಸಿಬಿಯನ್ನು ಹೊತ್ತು ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಡ್ಡಬಂದ ವ್ಯಾನ್ಗೆ ಢಿಕ್ಕಿ ಹೊಡೆಯುವುದನ್ನು ತಡೆಯಲು ಹೋಗಿ ರಸ್ತೆ ಬದಿಯ ಖಾಲಿ ಜಾಗಕ್ಕೆ ಬಸ್ ನುಗ್ಗಿದೆ.
ಇದರ ಪರಿಣಾಮ 32 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸದೆ ಪಾರಾಗಿದ್ದಾರೆ. ಘಟನೆಯಿಂದ ಮಾರುತಿ ವ್ಯಾನ್ ಕೂಡ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಈ ಘಟನೆಯಿಂದಾಗಿ ಕೆಲಕಾಲ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story