ಫೆ.19 ರಂದು ಕರ್ನಾಟಕ ಬಂದ್ ಇಲ್ಲ: ಕರಾಳ ದಿನ ಆಚರಣೆ
ಬೆಂಗಳೂರು, ಫೆ.17: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಫೆ.19ಕ್ಕೆ ಕರೆ ನೀಡಿದ್ದ ಕರ್ನಾಟಕ ಬಂದ್ ಕೈಬಿಟ್ಟಿದ್ದು, ಕರಾಳ ದಿನ ಆಚರಿಸಲು ನಿರ್ಧರ ಕೈಗೊಳ್ಳಲಾಗಿದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕುಂಭ ಮೇಳ, ಮಹಾಮಸ್ತಾಕಾಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಾಗೂ ಯಲಹಂಕದಲ್ಲಿ ಏರ್ ಶೋ ನಡೆಯುವ ಉದ್ದೇಶದಿಂದ ಬಂದ್ ನಿರ್ಧರದಿಂದ ಹಿಂದಕ್ಕೆ ಸರಿಯಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ನಾಳೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಕಪ್ಪು ಬಟ್ಟೆ ಧರಿಸಿ, ಕರಾಳ ದಿನ ಆಚರಣೆ ಮಾಡಲಾಗುವುದು ಎಂದ ಅವರು, ಬಂದ್ ವಿಚಾರದಲ್ಲಿ ಯಾರ ಒತ್ತಡವೂ ಇಲ್ಲ. ಬದಲಾಗಿ ಸ್ವಯಂ ನಿರ್ಧಾರ ಕೈಗೊಂಡಿದ್ದಾನೆ ಎಂದು ವಾಟಾಳ್ ಹೇಳಿದರು.
ಬಂದ್ಗೆ ಬೆಂಬಲವಿಲ್ಲ; ವಾಟಾಳ್ ನಾಗರಾಜ್ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ವಾಟಾಳ್ ನಾಗರಾಜ್, ಮಾತು ಮಾತಿಗೆ ಬಂದ್ ಎನ್ನುತ್ತಾರೆ. ಇದರಿಂದ ಬಂದ್ನ ಗಂಭೀರ ಪರಿಣಾಮವನ್ನು ಇಲ್ಲದಂತೆ ಆಗಿದೆ. ಹೀಗಾಗಿ, ನಾವು ಯಾವುದೇ ಕಾರಣಕ್ಕೂ ಬೆಂಬಲ ನೀಡಲ್ಲ ಎಂದಿದ್ದರು.
ಅದೇ ರೀತಿ, ವಿವಿಧ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿಲ್ಲ. ಹೀಗಾಗಿಯೇ, ವಾಟಾಳ್ ನಾಗರಾಜ್ ಬಂದ್ ಹಿಂಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.