ಉದ್ಯಮಿ, ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಬಂಧನ
ಬೆಂಗಳೂರು, ಫೆ.21: ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದ ಸಾಂತ್ವನ ನಿಲಯ ದಲ್ಲಿ ಪ್ರಭಾಕರ್ ರೆಡ್ಡಿ ಅವರನ್ನು ಬಂಧಿಸಿರುವುದಾಗಿ ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ನಗರದ ಮೈಲಸಂದ್ರ, ಕೋರಮಂಗಲ, ಎಚ್ಎಸ್ಆರ್ ಲೇಔಟ್ ಸೇರಿದಂತೆ ಹಲವೆಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ ಬಳಿಕ, ಗುರುವಾರ ರಾತ್ರಿ ಪ್ರಭಾಕರ್ ರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಭಾಕರ್ ರೆಡ್ಡಿ ವಿರುದ್ಧ ಭೂಕಬಳಿಕೆ ಸೇರಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ 40ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ವು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಪರಿಶೀಲನೆ ವೇಳೆ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ದಾಖಲಾತಿಗಳು ಸೇರಿದಂತೆ ಕೋಟ್ಯಾಂತರ ಮೌಲ್ಯದ ಜಮೀನು ಪತ್ರಗಳು ಪತ್ತೆಯಾಗಿವೆ.
ಇತ್ತೀಚೆಗೆ ಪ್ರಭಾಕರ್ ರೆಡ್ಡಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಪ್ರಕರಣ ಸಂಬಂಧ ಸಿಸಿಬಿ ತನಿಖೆ ಮುಂದುವರೆಸಲಾಗಿದೆ.
ಆರೋಪಿ ಪ್ರಭಾಕರ್ ರೆಡ್ಡಿ ವಿರುದ್ಧ 7 ವರ್ಷಗಳಲ್ಲಿ ವಂಚನೆ ಸೇರಿದಂತೆ ವಿವಿಧ ಆರೋಪದಡಿ 40 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದ್ದು, ಸಿಸಿಬಿ 300 ದಾಖಲೆಗಳನ್ನು ಜಪ್ತಿ ಮಾಡಿ ತನಿಖೆ ಕೈಗೊಂಡಿದೆ.