‘ಸೀಟು ಹಂಚಿಕೆ’ ಸಂಬಂಧ ಯಾವುದೇ ಸಮಸ್ಯೆ ಇಲ್ಲ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಬೆಂಗಳೂರು, ಫೆ. 22: ಲೋಕಸಭೆ ಚುನಾವಣಾ ಸೀಟು ಹಂಚಿಕೆ ಸಂಬಂಧ ಯಾವುದೇ ಸಮಸ್ಯೆ ಇಲ್ಲ. ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸೀಟು ಹಂಚಿಕೆ ಸಂಬಂಧ ಜೆಡಿಎಸ್ ಅಥವಾ ಕಾಂಗ್ರೆಸ್ ಮುಖಂಡರು ಯಾರೇ ಆಗಿದ್ದರೂ ಬೇರೆ-ಬೇರೆ ವ್ಯಾಖ್ಯಾನ ಬೇಡ ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು.
ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ನಿನ್ನೆ ರಾತ್ರಿ ಬೆಂಗಳೂರಿಗೆ ಬಂದಿದ್ದರು. ಆದರೆ, ಸಮಯವಿಲ್ಲದ ಕಾರಣ ಅವರು ಬೆಳಗ್ಗೆ ವಾಪಸ್ ತೆರಳಿದ್ದಾರೆ. ಇದಕ್ಕೆ ಬೇರೆ ಅರ್ಥಕಲ್ಪಿಸುವುದು ಬೇಡ. ವೇಣುಗೋಪಾಲ್ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಅವರು ಎಲ್ಲ ಕಡೆ ಓಡಾಡಬೇಕಿದೆ ಎಂದರು.
ಫೆ. 28ರಂದು ಅಹಮದಾಬಾದ್ನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಇದೆ. ಕಾರ್ಯಕ್ರಮ ಸಿದ್ಧತೆಗಾಗಿ ವೇಣುಗೋಪಾಲ್ ಅವರು ಓಡಾಡಬೇಕಿದೆ. ಹೀಗಾಗಿ ಅವರು ಕಾರ್ಯ ಒತ್ತಡದಲ್ಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ಇದೇ ವೇಳೆ ಸ್ಪಷ್ಟಪಡಿಸಿದರು.