ಮಂಗಳೂರಿಗೆ ಬರಲಿದೆ 'ವಂದೇ ಭಾರತ್' ಎಕ್ಸ್ ಪ್ರೆಸ್!
ಬೆಂಗಳೂರು, ಫೆ.23: ಮಂಗಳೂರು- ಬೆಂಗಳೂರು, ಮಂಗಳೂರು- ಚೆನ್ನೈ ಮತ್ತು ಮಂಗಳೂರು ಹೈದರಾಬಾದ್ ಮಾರ್ಗದಲ್ಲಿ ಶೀಘ್ರವೇ 'ವಂದೇ ಭಾರತ್' ಎಕ್ಸ್ಪ್ರೆಸ್ ರೈಲು ಓಡಾಟ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಪ್ರಕಟಿಸಿದರು.
"ಇದು ಒಂದು ಬಗೆಯ ಹೈಸ್ಪೀಡ್ ರೈಲಾಗಿದ್ದು, ದೇಶೀಯ ತಂತ್ರಜ್ಞಾನದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ" ಎಂದು ಗೋಯಲ್ ಹೇಳಿದರು. ಈ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಕೂಡಾ ಅಳವಡಿಸಲಾಗುವುದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 15ರಂದು ಹೊಸದಿಲ್ಲಿ ಮತ್ತು ವಾರಣಾಸಿ ನಡುವೆ ಸಂಚರಿಸುವ ದೇಶದ ಮೊಟ್ಟಮೊದಲ ಅರೆ-ಹೈಸ್ಪೀಡ್, ಎಂಜಿನ್ರಹಿತ 'ವಂದೇ ಭಾರತ್ ಎಕ್ಸ್ಪ್ರೆಸ್' (ಟಿ18) ರೈಲಿಗೆ ಚಾಲನೆ ನೀಡಿದ್ದರು. ಈ ರೈಲಿನಲ್ಲಿ ಜಿಪಿಎಸ್ ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ ಮತ್ತು ತುರ್ತು ಸಂದರ್ಭದಲ್ಲಿ ಚಾಲಕನನ್ನು ಸಂಪರ್ಕಿಸಲು ಅಗತ್ಯವಾದ ಟಾಕ್ಬ್ಯಾಕ್ ಸೌಲಭ್ಯ ಒಳಗೊಂಡಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 16 ಬೋಗಿಗಳನ್ನು ಹೊಂದಿದ್ದು, 1,128 ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿರುತ್ತದೆ.