ಮಾ.20 ರಿಂದ ಆರ್ಟಿಇ ಅರ್ಜಿ ಸಲ್ಲಿಕೆ ಆರಂಭ
ಬೆಂಗಳೂರು, ಮಾ.3: ರಾಜ್ಯಾದ್ಯಂತ ಶಿಕ್ಷಣ ಹಕ್ಕು ಕಾಯ್ದೆ(ಆರ್ಟಿಇ) ಅಡಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಮಾ.20 ರಿಂದ ಆರಂಭವಾಗಲಿದ್ದು, ಎ.15ರ ವರೆಗೂ ಕಾಲಾವಕಾಶವಿರುತ್ತದೆ.
ಆರ್ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲಿಚ್ಛಿಸುವ ಪೋಷಕರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ದಿನಾಂಕಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಮಾ.6 ರಂದು ನೆರೆಹೊರೆ ಎಲ್ಲ ಶಾಲೆಗಳ ತಾತ್ಕಾಲಿಕ ಪಟ್ಟಿ, ಮಾ.15ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಮಾ.18ರಂದು ಪ್ರಯೋಗಾರ್ಥ ಅರ್ಜಿ ಸಲ್ಲಿಕೆ ಮಾಡಿ, ಮಾ.20 ರಿಂದ ಎ.15 ರ ವರೆಗೂ ಪೋಷಕರಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಬಳಿಕ ಎ.25ರಂದು ಲಾಟರಿ ಪ್ರಕ್ರಿಯೆ ಮೂಲಕ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಮಾಡಲಾಗುವುದು, ಮೇ 1ರಂದು ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟುಗಳ ಹಂಚಿಕೆ, ಮೇ 2ರಿಂದ 8ರ ವರೆಗೆ ದಾಖಲಾತಿ, ಮೇ 25 ರಂದು ಎರಡನೇ ಸುತ್ತಿನ ಸೀಟು ಹಂಚಿಕೆ ಹಾಗೂ ಮೇ 30ರ ವರೆಗೂ ದಾಖಲಾತಿ ನಡೆಯುತ್ತದೆ.
ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು: ಆರ್ಟಿಇ ಅಡಿಯಲ್ಲಿ ಸೀಟು ಪಡೆಯಲಿಚ್ಛಿಸುವವರು ಮಗು ಮತ್ತು ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರಗಳು ಕಡ್ಡಾಯವಾಗಿ ಬೇಕಾಗಿರುತ್ತದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಆರ್.ಡಿ. ಸಂಖ್ಯೆಯನ್ನು ನಿಗದಿತ ಕಾಲಂನಲ್ಲಿ ಸರಿಯಾಗಿ ನಮೂದಿಸಬೇಕು. ದಾಖಲೆಗಳನ್ನು ಅಪ್ಲೋಡ್ ಮಾಡುವ ಅಗತ್ಯವಿಲ್ಲ.
ಅರ್ಜಿ ಸಲ್ಲಿಸುವವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಲ್ಲಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಉಚಿತವಾಗಿ ಅಥವಾ ಸರಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ನಗರದಲ್ಲಿ ಬೆಂಗಳೂರು ಒನ್, ಇತರೆ ನಗರಗಳಲ್ಲಿ ಕರ್ನಾಟಕ ಒನ್, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಶಾಲೆಗಳ ಆದ್ಯತೆ ನಮೂದಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪೋಷಕರ ಸ್ವಂತ ಮೊಬೈಲ್ ಫೋನ್ ಸಂಖ್ಯೆ ಹಾಗೂ ಇಂಟರ್ನೆಟ್ ಸೌಲಭ್ಯವಿದ್ದಲ್ಲಿ ಆನ್ಲೈನ್ ಮೂಲಕವೂ ನೇರವಾಗಿ ಅರ್ಜಿ ಸಲ್ಲಿಸಬಹುದು.
2015ರ ಎ.1ರ ನಂತರ ಬರಗಾಲದ ಕಾರಣ ಆತ್ಯಹತ್ಯೆ ಮಾಡಿಕೊಂಡ ರೈತರ ಮಕ್ಕಳು, ವಿಶೇಷ ಪ್ರವರ್ಗಕ್ಕೆ ಸೇರಿದ ಅನಾಥ ಮಗು, ಎಚ್ಐವಿ ಬಾಧಿತ/ಸೋಂಕಿತ ಮಗು, ಮಂಗಳಮುಖಿ ಮಗು, ವಿಶೇಷ ಅಗತ್ಯತೆಯುಳ್ಳ ಮಗು, ವಲಸೆ ಮತ್ತು ಬೀದಿ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.