ಕ್ಷುಲ್ಲಕ ವಿಚಾರ: ಆಟೊ ಚಾಲಕನ ಹತ್ಯೆ
ಬೆಂಗಳೂರು, ಮಾ.11: ಕ್ಷುಲ್ಲಕ ವಿಚಾರವಾಗಿ ಇಬ್ಬರು ದುಷ್ಕರ್ಮಿಗಳು ಆಟೊ ಚಾಲಕನ ಮೇಲೆ ಹಲ್ಲೆ ನಡೆಸಿ, ಕೊಲೆಗೈದಿರುವ ಘಟನೆ ಇಲ್ಲಿನ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಮಲ್ಲೇಶಪಾಳ್ಯದ ನಿವಾಸಿ ವೆಂಕಟೇಶ್(29) ಕೊಲೆಯಾಗಿರುವ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ಆಟೊ ಚಾಲಕ ವೃತ್ತಿ ಮಾಡುತ್ತಿದ್ದ ವೆಂಕಟೇಶ್, ರವಿವಾರ ರಾತ್ರಿ ಸುಮಾರು 11:30ರ ಸಮಯದಲ್ಲಿ ಜಿ.ಎಂ.ಪಾಳ್ಯ, 4ನೇ ಕ್ರಾಸ್ ಆಸ್ಪತ್ರೆ ವೃತ್ತದ ಬಳಿ ತನ್ನ ಇಬ್ಬರು ಸಂಬಂಧಿಕರ ಜೊತೆ ಆಟೊದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರು ಬೈಕ್ ಸವಾರರು, ಯಾವುದೋ ವಿಳಾಸ ಕೇಳಿದ್ದಾರೆ ಎನ್ನಲಾಗಿದೆ.
ಇದಕ್ಕೆ ವ್ಯಂಗ್ಯವಾಗಿ ಆಟೊ ಚಾಲಕ ವೆಂಕಟೇಶ್ ಉತ್ತರಿಸಿದ ಕಾರಣ ಇಬ್ಬರು ಸವಾರರು ಈತನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಹಲ್ಲೆ ನಡೆಸಿದಲ್ಲದೆ, ಆಟೊದಲ್ಲಿದ್ದ ಮದ್ಯದ ಬಾಟಲಿಯನ್ನು ತೆಗೆದುಕೊಂಡ ಸವಾರರು ವೆಂಕಟೇಶ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳೀಯರು ಮಾಹಿತಿ ನೀಡಿದ ಬಳಿಕ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳ್ಕಕೆ ದೌಡಾಯಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.