ತುಮಕೂರಿನಲ್ಲಿ ಸ್ಪರ್ಧಿಸದಿದ್ದರೆ ಕ್ಷೇತ್ರ ಬಿಟ್ಟುಕೊಡಿ: ದೇವೇಗೌಡರಿಗೆ ಪರಮೇಶ್ವರ್ ಮನವಿ
ಬೆಂಗಳೂರು, ಮಾ. 15: ಹಾಲಿ ಸಂಸದರಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರಿಗೆ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಸದಾಶಿವನಗರದಲ್ಲಿ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ತುಮಕೂರು ಕ್ಷೇತ್ರದಿಂದ ದೇವೇಗೌಡರೆ ಸ್ಪರ್ಧಿಸುವುದಾದರೆ ನಾವೂ ಅವರಿಗೆ ಬೆಂಬಲ ನೀಡಲು ಸಿದ್ಧರಿದ್ದೇವೆ. ಆದರೆ, ಅವರ ಬದಲಿಗೆ ಬೇರೆ ಯಾರೇ ಸ್ಪರ್ಧಿಸುವ ಬದಲು ಹಾಲಿ ಸಂಸದರಿಗೆ ಕ್ಷೇತ್ರವನ್ನು ಬಿಟ್ಟುಕೊಡಲು ಮನವಿ ಮಾಡಲಾಗಿದೆ. ಹತ್ತು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಪರಿಶೀಲನೆ ಸಮಿತಿಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ದೇವೇಗೌಡ ಮಾತುಕತೆ ನಡೆಸಿದ ಬಳಿಕ ತುಮಕೂರು ಕ್ಷೇತ್ರ ಜೆಡಿಎಸ್ ಪಡೆದುಕೊಂಡಿದೆ. ದೇವೇಗೌಡರು ಸ್ಪರ್ಧಿಸದಿದ್ದರೆ ಆ ಕ್ಷೇತ್ರವನ್ನು ನಮ್ಮ ಪಕ್ಷದ ಹಾಲಿ ಸಂಸದರಿಗೆ ಬಿಟ್ಟುಕೊಡಬೇಕು ಎಂದು ಅವರು ಕೋರಿದರು.