ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ: ಮಾಜಿ ಸಚಿವ ಯೋಗೇಶ್ವರ್
ಬೆಂಗಳೂರು, ಮಾ. 15: ಬೆಂಗಳೂರು ಗ್ರಾಮಾಂತ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಹೈಕಮಾಂಡ್ ಸೂಚಿಸದರೆ ನಾನು ಸಿದ್ದ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ
ಶುಕ್ರವಾರ ರಾಮನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಪಾಲಿಗೆ ಸವಾಲಿನ ಕ್ಷೇತ್ರ. ಹಾಲಿ ಸಂಸದ ಡಿ.ಕೆ.ಸುರೇಶ್ ಎರಡು ಬಾರಿ ಆಯ್ಕೆ ಆಗಿದ್ದಾರೆ. ಆದರೆ, ಚನ್ನಪಟ್ಟಣ ಜನತೆಗೆ ಅವರು ಏನೂ ಮಾಡಿಲ್ಲ ಎಂದು ದೂರಿದರು.
ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಈ ಕ್ಷೇತ್ರದಲ್ಲೇ ಯಾರೇ ನಿಂತರೂ ಗೆಲ್ಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದ ಅವರು, ಡಿಕೆ ಸಹೋದರರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಯೋಗೇಶ್ವರ್ ಇದೇ ವೇಳೆ ವಾಗ್ದಾಳಿ ನಡೆಸಿದರು. ಹಣ-ಅಧಿಕಾರದ ದರ್ಪದಿಂದ ಡಿಕೆ ಸಹೋದರರು ಎಲ್ಲವನ್ನು ನಿಯಂತ್ರಿಸುತ್ತಿದ್ದು, ಜನಬಲದ ಮುಂದೆ ಹಣ-ಅಧಿಕಾರಿ ಏನೂ ಅಲ್ಲ. ಸಂಸದ ಡಿ.ಕೆ.ಸುರೇಶ್ ಎರಡು ಬಾರಿಗೆ ಗೆದಿದ್ದೇನೆ ಎಂಬ ಅಹಂಕಾರವೇ ಅವರನ್ನು ಈ ಬಾರಿ ಸೋಲಿಸಲಿದೆ ಎಂದು ಯೋಗೇಶ್ವರ್ ಭವಿಷ್ಯ ನುಡಿದರು.