ನೀರಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ: ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್
ಬೆಂಗಳೂರು, ಮಾ.15: ಬೇಸಿಗೆ ಮುಗಿಯುವವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಅವಶ್ಯಕವಾದ ನೀರನ್ನು ಪೂರೈಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಮೇಯರ್ ಗಂಗಾಂಬಿಕೆ ಹಾಗೂ ಜಲಮಂಡಳಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೆಆರ್ಎಸ್ ಮತ್ತು ಕಬಿನಿಯಲ್ಲಿ 25.5 ಟಿಎಂಸಿ ನೀರು ಲಭ್ಯವಿದೆ. ಬೆಂಗಳೂರು ನಗರಕ್ಕೆ ಮುಂದಿನ ಮೂರೂವರೆ ತಿಂಗಳುಗಳ ಕಾಲ 10 ಟಿಎಂಸಿ ನೀರನ್ನು ಪೂರೈಕೆಗೊಳ್ಳಲಿದೆ. ಬೇಸಿಗೆಯಲ್ಲಿ ನೀರಿಗೆ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ 110 ಹಳ್ಳಿಗಳಿಗೆ ಹಾಗೂ ನಗರ ಪ್ರದೇಶಕ್ಕೆ 1,400 ಎಂಎಲ್ಡಿ ನೀರು ಬೇಕಾಗಿದೆ. ಕಾವೇರಿ ನೀರಿನ ಜೊತೆಗೆ ಬೋರ್ವೆಲ್ಗಳಿಂದಲೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಜಲಮಂಡಳಿ ವ್ಯಾಪ್ತಿಯಲ್ಲಿ 9,891 ಬೋರ್ವೆಲ್ಗಳು ಇದ್ದು, ಈ ಪೈಕಿ 9,273 ಬೋರ್ವೆಲ್ಗಳು ಕಾರ್ಯನಿರ್ವಹಿಸುತ್ತಿವೆ. 3 ಲಕ್ಷದ 60 ಸಾವಿರ ಖಾಸಗಿ ಬೋರ್ವೆಲ್ಗಳು ಇವೆ ಎಂದು ಮಾಹಿತಿ ನೀಡಿದರು.
ನೀರು ವ್ಯತ್ಯಯವಾದಲ್ಲಿ 65 ಟ್ಯಾಂಕರ್ಗಳ ಮೂಲಕ ಜಲಮಂಡಳಿ ಉಚಿತವಾಗಿ ನೀರು ಪೂರೈಸಲಿದೆ. 110 ಹಳ್ಳಿಗಳಲ್ಲಿ ಕಾವೇರಿ ನೀರು ಪೂರೈಸಲು ಮುಂದಾಗಿದ್ದು, 29 ಹಳ್ಳಿಗಳಲ್ಲಿ ನೀರು ಪೂರೈಕೆಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಇದರಿಂದ 35 ಸಾವಿರ ಕುಟುಂಬಗಳಿಗೆ ನೀರು ಸಿಗಲಿದ್ದು, 6 ಸಾವಿರ ಜನರ ಪೈಕಿ 1 ಸಾವಿರ ಜನರು ನೀರಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
ನಗರದಲ್ಲಿ ಹೆಚ್ಚುವರಿ ನೀರಿನ ಟ್ಯಾಂಕರ್ ಬೇಕಾಗಿದ್ದಲ್ಲಿ ಅಲ್ಪಾವಧಿ ಟೆಂಡರ್ ಕರೆದು ಒಂದು ವಾರದೊಳಗೆ ನೀರಿನ ಟ್ಯಾಂಕರ್ಅನ್ನು ಖರೀದಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಝಿದ್, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದಲ್ಲಿ ಖಾಸಗಿ ಬೋರ್ವೆಲ್ಗಳೂ ಕೂಡ ನೀರು ಪೂರೈಸುತ್ತಿದ್ದು, ಅವುಗಳ ಮೇಲೆ ಕಡಿವಾಣ ಹಾಕಲು ಟ್ರೇಡ್ ಲೈಸೆನ್ಸ್, ಎಲ್ಲಿಂದ ನೀರು ಸಂಗ್ರಹಿಸಲಾಗುತ್ತಿದೆ, ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಲಾಗಿದೆಯೇ ಎಂಬ ಬಗ್ಗೆ ನಿಯಮಾವಳಿಗಳನ್ನು ಎರಡು ವಾರದೊಳಗೆ ರೂಪಿಸಲಾಗುವುದು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯು ಖಾಸಗಿ ಟ್ಯಾಂಕರ್ಗಳ ಮಾಲಕರು ಒಂದು ಟ್ಯಾಂಕರ್ ನೀರಿಗೆ ಎಷ್ಟು ದರ ನಿಗದಿ ಮಾಡಬೇಕುಎಂಬುದರ ಬಗ್ಗೆ ನಿರ್ಧರಿಸಲಿದ್ದಾರೆ.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತರು.