'ಕೈ' ತಪ್ಪಿದ ತುಮಕೂರು ಕ್ಷೇತ್ರ: ಹೈಕಮಾಂಡ್ ವಿರುದ್ಧ ಪರಮೇಶ್ವರ್ ಅಸಮಾಧಾನ
ಬೆಂಗಳೂರು, ಮಾ. 18: ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಕೈತಪ್ಪಿರುವುದರಿಂದ ನಮಗೆ ಆತಂಕ ಮತ್ತು ತೀವ್ರ ಅಸಮಾಧಾನವೂ ಆಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸೋಮವಾರ ಸದಾಶಿವ ನಗರದಲ್ಲಿನ ತನ್ನ ಸರಕಾರಿ ನಿವಾಸದಲ್ಲಿ ಮಾತನಾಡಿದ ಅವರು, ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು. ಹಾಲಿ ಸಂಸದರ ಬದಲಾವಣೆ ಬೇಡ ಎಂದು ತೀರ್ಮಾನಿಸಲಾಗಿತ್ತು. ನಾವು ಮಂಡ್ಯ, ಹಾಸನ ಕೇಳುವುದು ಬೇಡವೆಂದು ನಿರ್ಧಾರವಾಗಿತ್ತು. ಈ ಸಂಬಂಧ ಸ್ಕ್ರೀನಿಂಗ್ ಕಮಿಟಿಯಲ್ಲೂ ಚರ್ಚೆಯಾಗಿತ್ತು. ಆದರೆ, ಅಂತಿಮವಾಗಿ ತುಮಕೂರು ಕ್ಷೇತ್ರ ಜೆಡಿಎಸ್ಗೆ ಬಿಟ್ಟುಕೊಟ್ಟಿರುವುದು ಬೇಸರ ತರಿಸಿದೆ. ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು ಎಂದರು.
ವರಿಷ್ಠರು ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದು ಈ ತೀರ್ಮಾನ ಆತಂಕ ಹಾಗೂ ಅಸಮಾಧಾನ ತಂದಿದೆ. ಈ ಸಂಬಂಧ ನಮ್ಮ ನಾಯಕರಿಗೆ ಅಭಿಪ್ರಾಯ ಹೇಳಲಾಗಿದೆ. ಮಾಜಿ ಪ್ರಧಾನಿ ದೇವೇಗೌಡ ಸ್ಪರ್ಧಿಸಿದರೆ ನಮ್ಮ ಅಭ್ಯಂತರವಿಲ್ಲ. ಇಲ್ಲವಾದರೆ ಕ್ಷೇತ್ರ ಹಾಲಿ ಸಂಸದರಿಗೆ ನೀಡಬೇಕು ಎಂದು ಆಗ್ರಹಿಸಿದರು.
ದೇಶದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು. ಆ ದೃಷ್ಟಿಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ಅವರು ತಿಳಿಸಿದರು.
‘ತುಮಕೂರು ಕ್ಷೇತ್ರ ಬಿಟ್ಟುಕೊಡುವ ಸಂಬಂಧ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಮಾಡಲಾಗಿದೆ. ದೇವೇಗೌಡರೇ ಸ್ಪರ್ಧಿಸಿದರೆ ಹಂಚಿಕೆ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಗೆಲ್ಲುವ ದೃಷ್ಟಿಯಿಂದ ಬುದ್ಧಿವಂತಿಕೆ ಅಗತ್ಯ’
-ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ