ಹಣ ವಾಪಸ್ ಕೇಳಿದ್ದಕ್ಕೆ ಅತ್ಯಾಚಾರದ ಆರೋಪ ದಾಖಲಿಸುವ ಬೆದರಿಕೆ: ದೂರು
ಬೆಂಗಳೂರು, ಮಾ.20: ಎಪಿಎಂಸಿ ಮಾರುಕಟ್ಟೆ ನಿರ್ದೇಶಕಿಯೊಬ್ಬಾಕೆ ವ್ಯಕ್ತಿಯಿಂದ ಹಣ ಪಡೆದು, ವಾಪಸ್ ನೀಡಲು ಹಿಂದೇಟು ಹಾಕಿರುವುದಲ್ಲದೆ, ಅತ್ಯಾಚಾರ ಆರೋಪ ದೂರು ನೀಡುತ್ತೇನೆಂದು ಬೆದರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಯಡಿಯೂರು ಎಪಿಎಂಸಿ ನಿರ್ದೇಶಕಿ ಶಶಿಕಲಾ ಎಂಬಾಕೆ ಈ ಬೆದರಿಕೆ ಹಾಕಿದ್ದಾರೆನ್ನಲಾಗಿದ್ದು, ಈ ಸಂಬಂಧ ವಿಜಯ್ಗೌಡ ಎಂಬುವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?: 2010ನೇ ಸಾಲಿನಲ್ಲಿ ಯಲಹಂಕದಲ್ಲಿ ವಿಜಯ್ ಗೌಡ ಅವರನ್ನು ಪರಿಚಯ ಮಾಡಿಕೊಂಡಿದ್ದ ಶಶಿಕಲಾ, ತನ್ನ ಮಗಳಿಗೆ ಐಎಎಸ್ ಪರೀಕ್ಷೆಗೆ ಸೇರಿಸಬೇಕೆಂದು ನೆಪ ಹೇಳಿ, ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಕೆಲ ದಿನಗಳ ಹಿಂದೆ, ವಿಜಯ್ಗೌಡ ಹಣ ವಾಪಸ್ ನೀಡಿ ಎಂದಾಗ, ಶಶಿಕಲಾ ಮತ್ತು ಈಕೆಯ ಪತಿ ರಮೇಶ್ ಬಾಬು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಶಶಿಕಲಾ, ಇಲ್ಲಿನ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ವಿಜಯ್ ಗೌಡ ವಿರುದ್ಧ ದೂರು ನೀಡಿ, ಅತ್ಯಾಚಾರ ಆರೋಪದಡಿ ದೂರು ಸಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವಿಜಯ್ ಗೌಡ ಆರೋಪಿಸಿದ್ದಾರೆ.