ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ: ಎಸ್ಸಿ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಕೋದಂಡರಾಮ ರಾಜೀನಾಮೆ
ಬೆಂಗಳೂರು, ಮಾ. 25: ‘ಅಸ್ಪೃಶ್ಯತೆ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು ಮೊದಲು ಪಕ್ಷದಲ್ಲಿನ ಅಸ್ಪೃಶ್ಯತೆ ಆಚರಣೆ ನಿರ್ಮೂಲನೆ ಮಾಡಲಿ. ಚುನಾವಣಾ ಸಮಿತಿಗಳಲ್ಲಿ ಮೋರ್ಚಾ ಪದಾಧಿಕಾರಿಗಳನ್ನು ನೇಮಿಸದೆ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಎಸ್ಸಿ ಮೋರ್ಚಾ ಬೆಂಗಳೂರು ಮಹಾನಗರ ಅಧ್ಯಕ್ಷ ಎಚ್.ಕೋದಂಡರಾಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷವು ಎಸ್ಸಿ ಮೋರ್ಚಾವನ್ನು ಕಾಟಾಚಾರಕ್ಕೆ ಮಾಡಿದಂತಿದೆ. ಪ್ರತಿ ಕ್ಷೇತ್ರಕ್ಕೆ ಅನ್ಯ ಮೋರ್ಚಾಗಳಿಗೆ ನೀಡುವ ಪ್ರಾತಿನಿಧ್ಯವನ್ನು ಎಸ್ಸಿ ಮೋರ್ಚಾಕ್ಕೆ ನೀಡುತ್ತಿಲ್ಲ. ಈ ಬಗ್ಗೆ ಮುಖಂಡರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಮೋರ್ಚಾ ಪದಾಧಿಕಾರಿಗಳಿಗೆ ಗೌರವವೇ ಇಲ್ಲ ಎಂದು ಕೋದಂಡರಾಮ ಹೇಳಿದ್ದಾರೆ.
ಎಸ್ಸಿ ಮೋರ್ಚಾ ಮುಖಂಡರಿಗೆ ಸ್ವತಂತ್ರ ಸಂಘಟನೆ ಮಾಡಲು ಬಿಡುತ್ತಿಲ್ಲ. ಕೆಲ ಪದಾಧಿಕಾರಿಗಳು ಅವರ ಸ್ಥಾನದ ಅರಿವಿಲ್ಲದವರನ್ನು ಆಯ್ಕೆ ಮಾಡಿ ಈ ಸಮುದಾಯವನ್ನು ಅವಮಾನ ಮಾಡುತ್ತಿದ್ದಾರೆ. ಹೀಗಾಗಿ ನಾನು ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಎನ್. ಸದಾಶಿವರಿಗೆ ಕೋದಂಡರಾಮ ಪತ್ರ ಬರೆದಿದ್ದಾರೆ.