'ಸಾಲಮನ್ನಾ ಯೋಜನೆ’ಗೂ ಅನುಮತಿ ನೀಡಿ: ಚುನಾವಣಾ ಆಯೋಗಕ್ಕೆ ಸಿಎಂ ಎಚ್ಡಿಕೆ ಮನವಿ
ಬೆಂಗಳೂರು, ಮಾ. 26: ಪ್ರಧಾನಮಂತ್ರಿ ‘ಕೃಷಿ ಸಮ್ಮಾನ್ ಯೋಜನೆ’ಯಡಿ ರೈತರ ಖಾತೆಗಳಿಗೆ ಹಣ ಹಾಕಲು ಕೇಂದ್ರ ಸರಕಾರಕ್ಕೆ ಅನುಮತಿ ನೀಡಿದ ಮಾದರಿಯಲ್ಲೆ ರಾಜ್ಯ ಸರಕಾರದ ‘ಸಾಲಮನ್ನಾ ಯೋಜನೆ’ಗೂ ಅನುಮತಿ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ರಾಮನಗರದಲ್ಲಿ ಮಾತನಾಡಿದ ಅವರು, ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ 2ಸಾವಿರ ರೂ.ಹಾಕಲು ಆಯೋಗ ಅನುಮತಿ ನೀಡಿದೆ. ಆದರೆ, ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಚಾಲ್ತಿಯಲ್ಲಿ ಇರುವ ಸಾಲಮನ್ನಾ ಯೋಜನೆ ಜಾರಿಗೆ ನಿರ್ಬಂಧ ಹೇರಿದೆ.
ಸಾಲಮನ್ನಾ ಯೋಜನೆಯಡಿ ಎರಡನೆ ಕಂತಿನಲ್ಲಿ 11ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದೇವೆ. ಆದರೆ, ಇದನ್ನು ರೈತರ ಖಾತೆಗೆ ಹಾಕದಂತೆ ಚುನಾವಣಾ ಆಯುಕ್ತರು ಸೂಚನೆ ನೀಡಿದ್ದಾರೆ. ಆಯೋಗದ ಈ ಇಬ್ಬಗೆಯ ನೀತಿಯನ್ನು ಖಂಡಿಸುತ್ತೇನೆ ಎಂದರು.
ಮಾ.31ಕ್ಕೆ ಮೈತ್ರಿ ಸಮಾವೇಶ
ದೇಶಕ್ಕೆ ಹೊಸ ರಾಜಕೀಯ ಸಂದೇಶ ನೀಡುವ ಉದ್ದೇಶದಿಂದ ಮಾ.31ರಂದು ಬೆಂಗಳೂರು ಹೊರವಲಯದಲ್ಲಿನ ಮಾದನಾಯಕನಹಳ್ಳಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಸಮಾವೇಶ ಏರ್ಪಡಿಸಲಾಗುವುದು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಮಾತನಾಡಲಿದ್ದಾರೆ’
-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ