ಆಟೊ ಕಳವು ಪ್ರಕರಣ: ಇಬ್ಬರ ಬಂಧನ
ಬೆಂಗಳೂರು, ಎ.3: ಸೀಜಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು, ಫೈನಾನ್ಸ್ ಹಣ ಕಟ್ಟದ ಆಟೊಗಳ ಮಾಹಿತಿ ಪಡೆದು, ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಇಲ್ಲಿನ ಶ್ರೀರಾಂಪುರ ಠಾಣಾ ಪೊಲೀಸರು ಬೇಧಿಸಿದ್ದಾರೆ.
ಬನಶಂಕರಿಯ ಶ್ರೀನಿವಾಸನಗರದ ರಾಜು(38) ಹಾಗೂ ಬಸವೇಶ್ವರನಗರದ ಹೇಮಂತ್ ಕುಮಾರ್(28) ಬಂಧಿತ ಆರೋಪಿಗಳಾಗಿದ್ದು, ಇವರ ವಶದಲ್ಲಿದ್ದ 13.20 ಲಕ್ಷ ರೂ.ಮೌಲ್ಯದ 12 ಆಟೊರಿಕ್ಷಾಗಳನ್ನು ಜಪ್ತಿ ಮಾಡಲಾಗಿದೆ.
ರಾಮಚಂದ್ರಪುರದ 4ನೇ ಮುಖ್ಯರಸ್ತೆಯಲ್ಲಿ ಅಫ್ಜಲ್ ಖಾನ್ ಎಂಬುವರು, ನಿಲ್ಲಿಸಿದ್ದ ಆಟೋ ರಿಕ್ಷಾವನ್ನು ಯಾರೋ ಕಳ್ಳರು ಕೊಂಡು ಹೋಗಿದ್ದಾರೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಸ್ಆರ್ ಆಟೊ ಕನ್ಸ್ಲ್ಟೆಂಟ್ ಎಂಬ ಹೆಸರಿನ ಆಟೊ ಫೈನಾನ್ಸ್ ಮತ್ತು ಸಿಜಿಂಗ್ ಮಾಡುವ ಅಂಗಡಿಯಲ್ಲಿ ಬಂಧಿತರು ಕೆಲಸ ಮಾಡುತ್ತಿದ್ದರು. ಕಂಪೆನಿಗಳಿಂದ ಆಟೊ ಫೈನಾನ್ಸ್ಗೆ ಪಡೆದು ಹಣ ಪಾವತಿ ಮಾಡದೆ, ಇರುವಂತಹ ಆಟೊಗಳನ್ನು ಜಪ್ತಿ ಮಾಡಲು ಅಧಿಕೃತ ಪರವಾನಿಗೆ ಪಡೆದಿದ್ದರು. ಆದರೆ, ಆರೋಪಿಗಳು ಮಾಹಿತಿ ಅನ್ನು ದುರುಪಯೋಗಪಡಿಸಿಕೊಂಡು ಆಟೊ ಕಳವು ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಅಂಗಡಿ ಮಾಲಕರಾದ ರಮೇಶ್, ರಾಮು ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.