ಯುಪಿಎಸ್ಸಿಯಲ್ಲಿ 17ನೆ ರ್ಯಾಂಕ್ ಪಡೆದ ಹುಬ್ಬಳ್ಳಿಯ ಯುವಕ
ಬೆಂಗಳೂರು, ಎ.6: ಯುಪಿಎಸ್ಸಿ ಮೈನ್ಸ್ ಪರೀಕ್ಷೆಯಲ್ಲಿ ಅಗ್ರ 10 ರ್ಯಾಂಕಿಂಗ್ನಲ್ಲಿ ಕರ್ನಾಟಕದ ಯಾರು ಕೂಡಾ ಸ್ಥಾನ ಪಡೆಯದಿದ್ದರೂ, ಅಗ್ರ 50 ಮಂದಿಯ ಪೈಕಿ ಸೇರಿರುವ ಇಬ್ಬರು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ರಾಹುಲ್ ಶರಣಪ್ಪ ಸಂಕನೂರು 17ನೇ ರ್ಯಾಂಕ್ ಪಡೆದಿದ್ದರೆ, ಲಕ್ಷ್ಮಿ ಎನ್ 45ನೇ ಸ್ಥಾನದಲ್ಲಿದ್ದಾರೆ. ರಾಹುಲ್ ಬೆಂಗಳೂರಿನ ಆರ್ ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ನಲ್ಲಿ ಬಿಇ ಪದವಿ ಪಡೆದಿದ್ದಾರೆ. ಒಂದು ವರ್ಷ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದ ಬಳಿಕ, ದೆಹಲಿಯಲ್ಲಿ ಕೋಚಿಂಗ್ ಸೇರಿದರು. ಮೂರನೇ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇವರು ಯಶಸ್ಸು ಸಾಧಿಸಿದ್ದಾರೆ.
ಮೊಮ್ಮಗ ಐಎಎಸ್ ಅಧಿಕಾರಿಯಾಗುವುದನ್ನು ನೋಡುವುದು ಅಜ್ಜ ವಿ.ಪಿ.ಸಂಕನೂರ್ ಅವರ ಆಸೆಯಾಗಿತ್ತು ಎಂದು ರಾಹುಲ್ ಹೇಳಿದ್ದಾರೆ. ರಾಹುಲ್, ಹುಬ್ಬಳ್ಳಿ ನಿವಾಸಿ ಹಾಗೂ ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶರಣಪ್ಪ ವಿ.ಸಂಕನೂರ್ ಅವರ ಪುತ್ರ.
ಮಲ್ಲೇಶ್ವರ ನಿವಾಸಿ ಲಕ್ಷ್ಮಿ ಐಎಫ್ಎಸ್ ಪರೀಕ್ಷೆಯಲ್ಲಿ 50ನೇ ರ್ಯಾಂಕ್ ಪಡೆದಿದ್ದಾರೆ. "ನಾನು ಐಎಎಸ್ ಆಯ್ಕೆ ಮಾಡಿಕೊಳ್ಳುವ ಅರ್ಹತೆ ಪಡೆದದ್ದಕ್ಕೆ ಸಂತೋಷವಾಗುತ್ತಿದೆ" ಎಂದು ಅವರು ಹೇಳಿದರು.
ಬಿಎಂಸಿ ಹಳೆ ವಿದ್ಯಾರ್ಥಿ ಹಾಗೂ ಮೈಸೂರು ನಿವಾಸಿ ಡಾ.ಆಕಾಶ್ ಶಂಕರ್ ಆರನೇ ಪ್ರಯತ್ನದಲ್ಲಿ 78ನೇ ರ್ಯಾಂಕ್ ಪಡೆದಿದ್ದಾರೆ. ಇವರು 2017ನೇ ಬ್ಯಾಚ್ನ ಕೆಎಎಸ್ ಅಧಿಕಾರಿ.