ನೀವು ಹುಟ್ಟಿರುವುದೇ ದೇಶ ಹಾಳು ಮಾಡಲಿಕ್ಕೆ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಿಡಿ
ಬೆಂಗಳೂರು, ಎ.8: ಅಪಾರ್ಟ್ಮೆಂಟ್ಗಳಿಗೆ ಸ್ವಾಧೀನಪತ್ರ(ಒಸಿ) ನೀಡಲು ವಿಳಂಬ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದು, ನೀವೆಲ್ಲ ಈ ದೇಶವನ್ನು ಹಾಳು ಮಾಡುವುದಕ್ಕೆ ಹುಟ್ಟಿದ್ದೀರಿ ಎಂದು ಕಿಡಿಕಾರಿದೆ.
ಅಪಾರ್ಟ್ಮೆಂಟ್ಗಳಿಗೆ ಸ್ವಾಧೀನಪತ್ರ ನೀಡುತ್ತಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಸತ್ಯನಾರಾಯಣ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ನ್ಯಾಯಪೀಠ ಪ್ರತಿಕ್ರಿಯಿಸಿ, ಬಿಬಿಎಂಪಿಯು ಜನಸ್ನೇಹಿಯಾಗಿಲ್ಲ. ಅಪರಾಧ ಹಿನ್ನೆಲೆಯುಳ್ಳವರು ಪಾಲಿಕೆಯನ್ನು ನಿಯಂತ್ರಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಬಿಬಿಎಂಪಿ ಅಧಿಕಾರಿಗಳ ಬಳಿ ಬಂದರೆ ನೀವುಗಳು ಜನರನ್ನು ಬಿಸಿ ನೀರಿನಲ್ಲಿ ಕುದಿಸಿದಂತೆ ಕುದಿಸಿ ಅವರ ಪ್ರಾಣವನ್ನು ಹಿಂಡುತ್ತೀರಿ, ಅವರಿಂದ ಯಥೇಚ್ಛವಾಗಿ ಹಣವನ್ನು ಪಡೆಯುತ್ತೀರಿ ಎಂದು ನ್ಯಾಯಪೀಠವು ತೀವ್ರ ವಾಗ್ದಾಳಿ ನಡೆಸಿತು.
ಬಿಬಿಎಂಪಿ ಸ್ವಾಧೀನ ಪತ್ರವನ್ನು ನೀಡುವುದನ್ನೆ ದೊಡ್ಡ ದಂಧೆಯನ್ನಾಗಿ ಮಾಡಿಕೊಂಡಿದ್ದು, ಈ ದಂಧೆಗೆ ಕಡಿವಾಣ ಹಾಕುವ ಅಗತ್ಯತೆ ಇದೆ. ಈ ಪ್ರಕರಣವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಅಧಿಕಾರಿಗಳ ನಾಟಕ ಕೂಡ ಇಲ್ಲಿ ನಡೆಯೋದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತು. ವಿಚಾರಣೆಯನ್ನು ಎ.12ಕ್ಕೆ ಮುಂದೂಡಿದೆ.