ಮತದಾನ ಮಾಡಿದವರಿಗೆ ಮಾತ್ರ ಕ್ಷೌರ; ಸವಿತಾ ಸಮಾಜ
ಬೆಂಗಳೂರು, ಎ.11: ಮತದಾನದ ದಿನ ಮತ ಚಲಾಯಿಸಿ ಬಂದವರಿಗಷ್ಟೇ ಸೇವೆ ಒದಗಿಸಲು ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ತೀರ್ಮಾನಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸವಿತಾ ಸಮಾಜ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಎಂ.ಬಿ. ಶಿವಕುಮಾರ್, ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಸವಿತಾ ಸಮಾಜ ಜನ ಜಾಗೃತಿ ಮೂಡಿಸಲು ಕ್ಷೌರ ಕಾಯಕ ಆಂದೋಲನ ಹಮ್ಮಿಕೊಂಡಿದೆ.
ಎ.18 ಮತ್ತು 23ರಂದು ಯಾರು ಮತಚಲಾವಣೆ ಮಾಡುತ್ತಾರೆ ಅವರಿಗೆ ಮಾತ್ರ ಕ್ಷೌರ ಮಾಡಲಾಗುವುದು. ಮತ ಚಲಾಯಿಸದಿದ್ದರೆ ಅವರಿಗೆ ಕ್ಷೌರವಿಲ್ಲ. ಈ ಮೂಲಕವಾದರೂ, ಮತದಾನ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ಜಾತಿ ಧರ್ಮದ ಹೆಸರಿನಲ್ಲಿ ಚುನಾವಣಾ ರಾಜಕಾರಣಕ್ಕೆ ಮುಂದಾಗಿರುವ ಸಂಸದ ಎಲ್.ಆರ್.ಶಿವರಾಮೇಗೌಡರ ಜಾತಿ ಸಂಘರ್ಷದ ನಿಲುವುಗಳನ್ನು ಖಂಡಿಸಲಾಗುವುದು. ಸುಮಲತಾ ಅವರ ಕುರಿತು ಜಾತಿ ನಿಂದನೆ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಶಿವರಾಮೇಗೌಡರು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪರಿಪಾಲಿಸುವುದರ ಬದಲಿಗೆ ಜಾತಿ ರಾಜಕೀಯ ಮಾಡಲು ಹೊರಟಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.