ತಪ್ಪು ಮಾಡದಿದ್ದರೆ ಐಟಿ ಇಲಾಖೆಯ ಪ್ರಶ್ನೆಗಳಿಗೇಕೆ ಭಯ: ಕಾಂಗ್ರೆಸ್, ಜೆಡಿಎಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಬೆಂಗಳೂರಿನಲ್ಲಿ ಬಿಜೆಪಿ ಸಮಾವೇಶ
ಬೆಂಗಳೂರು, ಎ.13: ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಸೇರಿದಂತೆ ಎಲ್ಲರೂ ಕಾನೂನಿಗೆ ತಲೆ ಬಾಗಲೇಬೇಕು. ನೀವು ತಪ್ಪು ಮಾಡದೇ ಇದ್ದರೆ, ಆದಾಯ ತೆರಿಗೆ ಇಲಾಖೆಯವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಯಾಕೆ ಭಯ ಪಡುತ್ತಿದ್ದೀರಾ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶನಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಯಾರೂ ಅನ್ನೋದೆ ಒಂದು ಪ್ರಶ್ನೆಯಾಗಿದೆ. ಸೂಪರ್ ಸಿಎಂ ಒಬ್ಬರಾದರೇ, ರಿಮೋಟ್ ಕಂಟ್ರೋಲ್ ಸಿಎಂ ಬೇರೆ ಇದ್ದಾರೆ ಎಂದು ಟೀಕಿಸಿದರು.
ಈ ಹಿಂದಿನ ಸರಕಾರವು 10 ಪರ್ಸೆಂಟ್ ಸರಕಾರವಾಗಿದ್ದರೆ, ಈಗಿನ ಸರಕಾರ 20 ಪರ್ಸೆಂಟ್ ಸರಕಾರವಾಗಿದೆ. ಜನ ಸಾಮಾನ್ಯರಿಂತ ನಾವು ಭಿನ್ನರಲ್ಲ ಎಂಬುದನ್ನು ಅರ್ಥ ಮಾಡಿಸಲು ನಾನು ಸರಕಾರಿ ವಾಹನಗಳ ಮೇಲಿನ ಕೆಂಪು ದೀಪವನ್ನು ತೆಗೆದು ಹಾಕಿಸಿದೆ. ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಲೇಬೇಕು ಎಂದು ಅವರು ಹೇಳಿದರು.
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂಕೋರ್ಟ್ ನೇಮಿಸಿದ್ದ ಎಸ್ಐಟಿ ನನಗೆ ಸಮನ್ಸ್ ನೀಡಿತು. ನಾನು ಮುಖ್ಯಮಂತ್ರಿ ಆಗಿದ್ದರೂ 9 ಗಂಟೆಗಳ ಕಾಲ ಸಾಮಾನ್ಯ ಪೊಲೀಸರ ಎದುರು ಕೂತು ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ. ಯಾವುದೇ ಅಪರಾಧ ಮಾಡಿಲ್ಲವೆಂದರೆ ಭಯ ಪಡುವುದು ಏಕೆ ಎಂದು ಅವರು ಪ್ರಶ್ನಿಸಿದರು.
ಆದಾಯ ತೆರಿಗೆ ಇಲಾಖೆಯವರು ಹೋದರೆ ಅವರನ್ನು ಬೆದರಿಸುತ್ತಾರೆ. ಅಲ್ಲದೇ, ಅವರ ವಿರುದ್ಧವೇ ಮೆರವಣಿಗೆ ಮಾಡಿ, ಪ್ರತಿಭಟನೆಗಳನ್ನು ಮಾಡುತ್ತಾರೆ. ಕಳ್ಳತನ ಮಾಡದಿದ್ದರೆ ಭಯ ಯಾಕೆ ? ಯಾರು ಲೂಟಿ ಮಾಡಿದ್ದಾರೋ ಅದನ್ನು ವಾಪಸ್ ಕೊಡಲೇಬೇಕು. ರಾಜ್ಯದಿಂದ ಹೆಚ್ಚಿನ ಬಿಜೆಪಿ ಸಂಸದರು ಆಯ್ಕೆಯಾದರೆ, ನಮಗೂ ಹೆಚ್ಚಿನ ಶಕ್ತಿ ಸಿಗುತ್ತದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಸೇನೆ ಹಾಗೂ ಭದ್ರತಾ ಪಡೆಗಳಿಗೆ ಒದಗಿಸಲಾಗಿರುವ ವಿಶೇಷ ಅಧಿಕಾರದ ಕಾನೂನ(ಆಫ್ಸಾ ಕಾಯ್ದೆ)ನ್ನು ಹಿಂಪಡೆಯುವುದಾಗಿ ಹೇಳಿರುವುದು, ಪ್ರತ್ಯೇಕತಾವಾದಿಗಳೊಂದಿಗೆ ಬೇಷರತ್ ಚರ್ಚೆ ನಡೆಸುವುದಾಗಿ ತಿಳಿಸಿದೆ. ಇದು ದೇಶದ ಭದ್ರತೆಯೊಂದಿಗೆ ಚೆಲ್ಲಾಟ ಮಾಡಿದಂತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಮ್ಮು ಕಾಶ್ಮೀರದ ಒಬ್ಬ ನಾಯಕ ಹೇಳುತ್ತಾನೆ, ದೇಶಕ್ಕೆ ಇಬ್ಬರು ಪ್ರಧಾನಿ ಬೇಕಂತೆ, ಒಬ್ಬ ಹೊಸದಿಲ್ಲಿಯಲ್ಲಿ, ನಿನ್ನೊಬ್ಬ ಕಾಶ್ಮೀರಕ್ಕೆ ಬೇಕಂತೆ. ಯೋಧರಿಗೆ ಕಲ್ಲಿನಲ್ಲಿ ಹೊಡೆಯವವರಿಗೆ ಮುಕ್ತ ಅವಕಾಶ ಕಲ್ಪಿಸಲು ದೇಶದ್ರೋಹದ ಕಾನೂನು ಹಿಂಪಡೆಯುತ್ತಾರಂತೆ. ಪಾಕಿಸ್ತಾನದ ರೀತಿಯಲ್ಲಿ ಮಾತನಾಡುವ ಕಾಂಗ್ರೆಸ್ ಹಾಗೂ ಅವರ ಸಹಯೋಗಿಗಳಿಗೆ ಠೇವಣಿ ಸಿಗಬಾರದು ಎಂದು ಅವರು ಕರೆ ನೀಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಮಹಾಮಿಲಾವಟ್(ಸಮ್ಮಿಶ್ರ ಸರಕಾರ), ರಿಮೋಟ್ ಕಂಟ್ರೋಲ್ ಸರಕಾರವಿದ್ದಾಗ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟವಾಗಿತ್ತು. ಆದರೆ, ಈ ಚೌಕಿದಾರ್ನ ಆಡಳಿತದಲ್ಲಿ ಒಂದೇ ಒಂದು ದೊಡ್ಡ ಸ್ಫೋಟವಾಗಿಲ್ಲ. ಅಮೆರಿಕ, ಇಸ್ರೇಲ್ ಮಾದರಿಯಲ್ಲಿ ಈ ಹೊಸ ಭಾರತ ಶತ್ರುಗಳ ಮೇಲೆ ನುಗ್ಗಿ ಹೊಡೆಯಲು ಪ್ರಾರಂಭಿಸಿದೆ. ಇದರಿಂದ, ದೇಶದ ಪ್ರತಿಯೊಬ್ಬ ನಾಗರಿಕನು ತಲೆ ಎತ್ತಿ ನಡೆಯುವಂತಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಆಡಳಿತದಲ್ಲಿ ಸ್ಪೋಟ ಸಂಭವಿಸಿದರೆ ಗೃಹ ಸಚಿವರ ಬದಲಾವಣೆಯಾಗುತ್ತಿತ್ತು. ಆದರೆ, ಮೋದಿ ಗೃಹ ಸಚಿವರನ್ನು ಬದಲಾಯಿಸಲಿಲ್ಲ, ಕೆಲಸ ಮಾಡುವ ಶೈಲಿಯನ್ನು ಬದಲಿಸಿದೆ. ಉಗ್ರರ ಅಡಗುತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡುವ ದಿಟ್ಟ ನಿರ್ಧಾರ ಕೈಗೊಂಡೆ ಎಂದು ಮೋದಿ ತಿಳಿಸಿದರು.
ಅಂತರಿಕ್ಷದಲ್ಲಿ ಉಪಗ್ರಹವನ್ನು ಹೊಡೆದುರುಳಿಸಬಲ್ಲ ತಂತ್ರಜ್ಞಾನವನ್ನು ಭಾರತದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ನಾವು ಈ ಪ್ರಯೋಗದಲ್ಲಿ ಯಶಸ್ವಿಯಾದ ವಿಶ್ವದ ನಾಲ್ಕನೇ ದೇಶವಾಗಿದ್ದೇವೆ. ನಮ್ಮ ಸರಕಾರ ಹುತಾತ್ಮ ಯೋಧರ ನೆನಪಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಿದೆ. ಯೋಧರ ಒಂದು ರ್ಯಾಂಕ್, ಒಂದು ಪೆನ್ಷನ್ ಯೋಜನೆ ಜಾರಿ ಮಾಡಿದ್ದೇವೆ. ಯೋಧರಿಗಾಗಿ 2.50 ಲಕ್ಷ ಗುಂಡು ನಿರೋಧಕ ಜಾಕೆಟ್ ಖರೀದಿಗೆ ಮುಂದಾಗಿದ್ದೇವೆ ಎಂದು ಅವರು ಟೀಕಿಸಿದರು.
ದೇಶದಲ್ಲಿ 100 ಕೋಟಿಗೂ ಅಧಿಕ ಮಂದಿ ಬಳಿ ಇವತ್ತು ಫೀಚರ್ ಹಾಗೂ ಸ್ಮಾರ್ಟ್ ಫೋನ್ಇದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ 6 ರಿಂದ 50 ಕೋಟಿ ತಲುಪಿದೆ. 300 ರೂ.ಗಳಿದ್ದ ಒಂದು ಜಿಬಿ ಡೆಟಾ ಬೆಲ ಇವತ್ತು, 10-11 ರೂ.ಗಳಷ್ಟಾಗಿದೆ. ಇದು ಮೋದಿಯ ಡಿಜಿಟಲ್ ಇಂಡಿಯಾ. 2014ರಲ್ಲಿ ಯುಪಿಎ ಸರಕಾರ ಕೇವಲ 59 ಗ್ರಾಮಗಳಿಗೆ ಆಪಿಕ್ಟಲ್ ಫೈಬರ್ ನೆಟ್ವರ್ಕ್ ತಲುಪಿಸಿತ್ತು. ನಾವು ಐದು ವರ್ಷಗಳಲ್ಲಿ 1.25 ಲಕ್ಷ ಪಂಚಾಯತ್ ಗಳಿಗೆ ಬ್ರಾಡ್ಬ್ಯಾಂಡ್ ಸೌಲಭ್ಯ ತಲುಪಿಸಿದ್ದೇವೆ ಎಂದು ಮೋದಿ ಹೇಳಿದರು.
ನವೋದ್ಯಮ ಕ್ಷೇತ್ರದಲ್ಲಿ ಭಾರತ ವಿಶ್ವದ ಮೂರನೆ ಸ್ಥಾನದಲ್ಲಿದೆ. ಇದರಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾದದ್ದು. ಕಾಂಗ್ರೆಸ್ ಬಳಿ ದೇಶದ ಭವಿಷ್ಯದ ಕುರಿತು ಯಾವುದೇ ದೃಷ್ಟಿಕೋನವಿಲ್ಲ. ತೆರಿಗೆ ಕಳ್ಳತನದ ಆರೋಪದಲ್ಲಿ ಕೋರ್ಟುಗಳಿಗೆ ಅಲೆದಾಡುತ್ತಿರುವವರು, ವಂಚನೆ ಆರೋಪದಲ್ಲಿ ಜಾಮೀನಿನ ಮೇಲೆ ಹೊರಗೆ ಇರುವವರು, ಮಧ್ಯಮ ವರ್ಗದವರನ್ನು ಸ್ವಾರ್ಥಿಗಳೆಂದು ಕರೆಯುವವರ ಮೇಲೆ ನೀವು ನಂಬಿಕೆ ಇಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ಕುಮಾರ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ವಿ.ಸದಾನಂದಗೌಡ, ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್, ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿನಿ ಸೂರ್ಯ, ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರಮೋದಿ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಆತ್ಮೀಯ ಬಂಧು, ಭಗಿನಿಯರೇ, ನಿಮಗೆ ನಿಮ್ಮ ಚೌಕಿದಾರ್ ನರೇಂದ್ರಮೋದಿಯ ನಮಸ್ಕಾರಗಳು ಎಂದರು. ಅಲ್ಲದೇ, ಇದೇ ವೇಳೆ ನಾಡಪ್ರಭು ಕೆಂಪೇಗೌಡ, ಕೇಂದ್ರದ ಮಾಜಿ ಸಚಿವ ಅನಂತ್ಕುಮಾರ್ ಹಾಗೂ ಶಾಸಕ ಬಿ.ಎನ್.ವಿಜಯಕುಮಾರ್ ಅವರನ್ನು ಸ್ಮರಿಸಿಕೊಂಡರು. ಮೋದಿಗೆ ಬೆಳ್ಳಿ ಕಮಲ ಹಾಗೂ ಬಿಲ್ಲು ಬಾಣವನ್ನು ಉಡುಗೊರೆಯಾಗಿ ನೀಡಲಾಯಿತು.