ವೈಟ್ ಟಾಪಿಂಗ್ ಕಾಮಗಾರಿ ನಿಲ್ಲಿಸಲು ಕೋರಿ ಅರ್ಜಿ: ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಎ.14: ನಗರದ ಜಯನಗರದ ಮಾಧವನ್ ಪಾರ್ಕ್ನಿಂದ ನೆಟ್ಟಕಲ್ಲಪ್ಪ ಸರ್ಕಲ್ವರೆಗೆ ಕೈಗೆತ್ತಿಗೊಂಡಿರುವ ವೈಟ್ಟಾಪಿಂಗ್ ಕಾಮಗಾರಿ ನಿಲ್ಲಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಸಂಬಂಧ ಜಯನಗರ ನಿವಾಸಿ ಎ.ಸಿ.ಚಂದ್ರಶೇಖರ್ ರಾಜು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.
ಬಿಬಿಎಂಪಿಯು ಮಾಧವನ್ ಪಾರ್ಕ್ನಿಂದ ಸೌತ್ಎಂಡ್ ರಸ್ತೆ ಮೂಲಕ ನೆಟ್ಟಕಲ್ಲಪ್ಪ ವೃತ್ತದವರೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಗೊಂಡಿದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ. ಕಾರಣ ಈ ರಸ್ತೆಗಳು ಬಹಳ ಅಗಲವಾಗಿವೆ. ಹೆಚ್ಚಿನ ವಾಹನ ಸಂಚಾರವೂ ಇಲ್ಲ ಹಾಗೂ ಸಂಚಾರ ದಟ್ಟಣೆಯೂ ಏರ್ಪಡುವುದಿಲ್ಲ. ಆದರೂ ವೈಟ್ ಟಾಪಿಂಗ್ ಮಾಡುತ್ತಾ ದುಂದು ವೆಚ್ಚ ಮಾಡಲಾಗುತ್ತಿದೆ. ಹೀಗಾಗಿ, ಕಾಮಗಾರಿ ಸ್ಥಗಿತಗೊಳಿಸುವಂತೆ ಪಾಲಿಕೆಗೆ ನಿರ್ದೇಶಿಸಬೇಕು ಎಂಬುದು ಅರ್ಜಿದಾರರ ಅಹವಾಲು ಆಗಿದೆ.