ಪ್ರಣಾಳಿಕೆಗಳಲ್ಲಿ ನೀರು-ಪರಿಸರ ಕಡೆಗಣನೆ: ಜಲತಜ್ಞ ರಾಜೇಂದ್ರ ಸಿಂಗ್
ಬೆಂಗಳೂರು, ಎ.15: ಲೋಕಸಭಾ ಚುನಾವಣೆ ನಿಮ್ಮಿತ್ತ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ದೋಷಪೂರಿತ ಅಭಿವೃದ್ಧಿ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆಯೇ ಹೊರತು ಜನರ ಮೂಲಭೂತ ಅವಶ್ಯಕತೆಗಳಾದ ನೀರು ಮತ್ತು ಪರಿಸರ ಅಂಶಗಳನ್ನು ಕಡೆಗಣಿಸಿದ್ದಾರೆ ಎಂದು ಜಲತಜ್ಞ ರಾಜೇಂದ್ರ ಸಿಂಗ್ ಆರೋಪಿಸಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಕೇವಲ ಮತ ಪಡೆಯುವ ಉದ್ದೇಶದಿಂದ ಪ್ರಣಾಳಿಕೆಯಲ್ಲಿ ಅಭಿವೃದ್ಧಿಯಲ್ಲದ ಅಂಶಗಳನ್ನು ಸೇರಿಸಿದ್ದಾರೆ. ಆದರೆ ರಾಜಕೀಯ ನಾಯಕರು ಜನರ ನಡುವೆ ಬೆರೆತು ಅವರ ಸಮಸ್ಯೆಗಳನ್ನು ಚರ್ಚಿಸಿ, ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕೇ ಹೊರತು, ಕೇವಲ ಚುನಾವಣೆಯ ಉದ್ದೇಶದಿಂದ ಪ್ರಣಾಳಿಕೆ ಬಿಡುಗಡೆ ಮಾಡಿ ಮತಯಾಚನೆ ಮಾಡುವುದು ಸರಿಯಾದ ನಡೆಯಲ್ಲ ಎಂದು ಹೇಳಿದರು.
ನೀರು ಮತ್ತು ಪರಿಸರ ಎಲ್ಲರ ಮೂಲಭೂತ ಅವಶ್ಯಕತೆ ಆಗಿರುವುದರಿಂದ ರಾಜಕೀಯ ಪಕ್ಷಗಳು ಮೊದಲು ಅದರ ಬಗ್ಗೆ ಗಮನ ಹರಿಸಿ ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಕೊಳ್ಳುವಂತೆ ನಾವು ‘ಜೈ ಜನ್ ಜೋಡೋ ಆಂದೋಲನ’ವನ್ನು ಪ್ರಾರಂಭಿಸಿದ್ದೇವೆ ಎಂದರು.
ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ನೀರಿಗಾಗಿ ಬಡೆದಾಡುತ್ತಿದ್ದಾರೆ. ಆದ್ದರಿಂದ ನಾವು ನೀರಿನ ಹಂಚಿಕೆಯನ್ನು ಹೇಗೆ ನಿರ್ವಹಿಸಬೇಕು ಎಂದು ಯೋಚಿಸದೇ ರಾಜಕೀಯ ಪಕ್ಷಗಳು ಜಗಳ ತಂದಿಡುತ್ತಿದ್ದಾರೆ. ಚುನಾವಣೆಗಳನ್ನು ಗೆಲ್ಲುವುದಕೋಸ್ಕರ ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆಯೇ ಹೊರತು ಪ್ರಜೆಗಳ ಹಿತಾಸಕ್ತಿಯನ್ನು ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜನರು ನೀರಿನ ಬಗ್ಗೆ ಪ್ರಶ್ನೆ ಮಾಡಿ ಅಂತಹ ಅಂಶಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿ ಎಂದು ಕೇಳಬೇಕು. ಈ ನಿಟ್ಟಿನಲ್ಲಿ ನಾವು ಜನತಾ ಪ್ರಣಾಳಿಕೆಯನ್ನು ಜಾರಿಗೊಳಿಸಿದ್ದು ಈ ಚುನಾವಣೆಯಲ್ಲಿ ಮಾತ್ರವಲ್ಲದೇ ಮುಂದಿನ ಚುನಾವಣೆಯಲ್ಲೂ ಈ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ನುಡಿದರು.
ಜನತಾ ಪ್ರಣಾಳಿಕೆ ಅಂಶಗಳು
* ಪರಿಸರ ಸಂಕ್ಷರಣೆ ಹಾಗೂ ಹವಾಮಾನ ಬದಲಾವಣೆ ತಡೆಯುವುದು.
* ಜಲ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ತಗ್ಗಿಸುವುದು.
* ಪರಿಸರ ಮಾಲಿನ್ಯದ ವಿರುದ್ಧ ಕಠಿಣ ಕ್ರಮ.
* ನದಿಗಳನ್ನು ಪುನಶ್ಚೇತನಗೊಳಿಸುವಂತೆ ಉತ್ತೇಜನ.
* ಜೀವ ವೈವಿಧ್ಯತೆಯನ್ನು ಸಂರಕ್ಷಿಸುವುದು.
* ಅರಣ್ಯ ರಕ್ಷಣೆಯ ಹೊಣೆಯನ್ನು ಸ್ಥಳೀಯರಿಗೆ ನೀಡುವುದು.
* ನದಿಗಳಿಗೆ ತ್ಯಾಜ್ಯವನ್ನು ಹಾಕದಂತೆ ತಡೆದು ದಡಗಳಲ್ಲಿ ಸಸ್ಯಗಳನ್ನು ವೃದ್ಧಿಸುವುದು.