ಕಾರಿನ ಟೈರ್ ನಲ್ಲಿ ಕೋಟ್ಯಂತರ ರೂ. ನಗದು ಪತ್ತೆ ಪ್ರಕರಣ: ಮಾಜಿ ಶಾಸಕ ಅಪ್ಪಾಜಿಗೌಡಗೆ ಐಟಿ ನೋಟಿಸ್
ಬೆಂಗಳೂರು, ಎ.23: ಕಾರಿನ ಚಕ್ರದೊಳಗೆ 2.30 ಕೋಟಿ ರೂ. ನಗದು ಪತ್ತೆ ಪ್ರಕರಣ ಸಂಬಂಧ ಮಾಜಿ ಶಾಸಕ ಅಪ್ಪಾಜಿಗೌಡ ಅವರಿಗೆ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಎ.20 ರಂದು ಭದ್ರಾವತಿ ಮಾರ್ಗವಾಗಿ ಬೆಂಗಳೂರಿನಿಂದ ಶಿವಮೊಗ್ಗ ನಗರಕ್ಕೆ ತೆರಳುತ್ತಿದ್ದ ಕಾರೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ವಾಹನದ ಚಕ್ರವೊಂದರಲ್ಲಿ 2 ಸಾವಿರ ರೂಪಾಯಿ ಮುಖ ಬೆಲೆಯ 2 ಕೋಟಿ 30 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಕಾರು ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆ ಹಣ ಅಪ್ಪಾಜಿಗೌಡರಿಗೆ ತಲುಪಿಸಲು ಹೊರಟಿದ್ದೆ ಎಂದು ಹೇಳಿದ್ದ ಎನ್ನಲಾಗಿದೆ. ಚಾಲಕ ನೀಡಿರುವ ಮಾಹಿತಿ ಆಧಾರದ ಮೇಲೆ ಮಾಜಿ ಶಾಸಕ ಅಪ್ಪಾಜಿಗೌಡರಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ವಿಚಾರಣೆ
ಇಂದು ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಮತದಾನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬುಧವಾರ(ನಾಳೆ) ಅಪ್ಪಾಜಿಗೌಡ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.