ಎಲ್ಲಾ ಶೂದ್ರರೂ ಬ್ರಾಹ್ಮಣರ ಗುಲಾಮರು ಎಂದು ಮನುಸ್ಮೃತಿಯಲ್ಲಿ ಹೇಳಿದೆ: ಕೆ.ಎಸ್.ಭಗವಾನ್
ಬೆಂಗಳೂರು, ಎ.23: ದೇಶದ ಜನರನ್ನು ಸಂವಿಧಾನ ರಕ್ಷಿಸುತ್ತಿದೆಯೇ ಹೊರತು, ಯಾವ ದೇವರುಗಳೂ ಅಲ್ಲ ಎಂದು ಹಿರಿಯ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ಗಾಂಧೀ ಭವನದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾ ವಾದ)ಯಿಂದ ಆಯೋಜಿಸಿದ್ದ ಬಿ.ಬಸವಲಿಂಗಪ್ಪಅವರ 95ನೇ ವರ್ಷದ ಜನ್ಮ ದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನಶಿಲ್ಪಿ ಅಂಬೇಡ್ಕರ್ ದೇಶದ ಎಲ್ಲರಿಗೂ ಸಮಾನತೆಯನ್ನು ಕಲ್ಪಿಸುವ ಸಲುವಾಗಿ ರಚಿಸಿರುವ ಸಂವಿಧಾನದಿಂದ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದನ್ನೇ ಬುಡಮೇಲು ಮಾಡಲು ಕೆಲವು ಮನುವಾದಿ ಮನಸ್ಸುಗಳು ಮುಂದಾಗಿವೆ ಎಂದು ದೂರಿದರು.
ಕೇಂದ್ರದಲ್ಲಿ ಅಧಿಕಾರ ನಡೆಸಿದ ಸರಕಾರದ ಸಚಿವರೊಬ್ಬರು ಸಂವಿಧಾನ ಬದಲಿಸಲು ನಾವು ಬಂದಿದ್ದೇವೆ ಎಂದಿದ್ದರು. ಇನ್ನು ಕೆಲವರು ಮತ್ತೊಂದು ಹೆಜ್ಜೆ ಮುಂದಿಟ್ಟು ಸಂವಿಧಾನದ ಪ್ರತಿಗಳನ್ನೇ ಸುಡುವ ಮೂಲಕ ಮನುಸ್ಮತಿಯನ್ನು ಮರು ಸ್ಥಾಪಿಸಲು ಪ್ರಯತ್ನಿಸಿದರು. ಆದರೂ, ಅದರ ವಿರುದ್ಧ ಬಲಿಷ್ಠವಾದ ಹೋರಾಟ ಮಾಡಲು ಯಾರು ಮುಂದೆ ಬರುವುದೇ ಇಲ್ಲ. ಸಂವಿಧಾನವನ್ನು ಏಕೆ ಬದಲಿಸಬೇಕೆಂದು ಪ್ರಶ್ನಿಸುವವರು ಇಲ್ಲದಂತಾಗಿದೆ ಭಗವಾನ್ ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮ ಮತ್ತು ಧಮ್ಮದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಧರ್ಮದಲ್ಲಿ ಎಲ್ಲ ರೀತಿಯ ಭೇದ-ಭಾವ, ಮೇಲು-ಕೀಳು ಇದೆ. ಆದರೆ, ಬುದ್ಧ ಧಮ್ಮದಲ್ಲಿ ಎಲ್ಲರೂ ಒಂದೇ ಎಂಬುದನ್ನು ಸಾರಲಾಗುತ್ತದೆ. ಧಮ್ಮಕ್ಕೂ ಮತ್ತು ಧರ್ಮಕ್ಕೂ ಇರುವ ವ್ಯತ್ಯಾಸವನ್ನು ಅಂಬೇಡ್ಕರ್ ತಮ್ಮ ಕೃತಿಗಳಲ್ಲಿ ವಿಮರ್ಶಿಸಿದ್ದಾರೆ ಎಂದು ಭಗವಾನ್ ಹೇಳಿದರು. ಮನುಸ್ಮತಿಯಲ್ಲಿ ಎಲ್ಲ ಶೂದ್ರರೂ ಬ್ರಾಹ್ಮಣರ ಗುಲಾಮರು, ಈ ವರ್ಗದ ಜನ ಬ್ರಾಹ್ಮಣರ ಸೇವೆ ಮಾಡಲು ಸೃಷ್ಟಿಯಾಗಿದ್ದಾರೆ ಎಂದು ಹೇಳಿದೆ. ಸಾವಿರಾರು ವರ್ಷಗಳಿಂದ ದೇವರನ್ನು ಪೂಜಿಸುತ್ತಲೇ ಬರಲಾಗುತ್ತಿದೆ ಎಂದರು.
ವಾಲ್ಮೀಕಿ ರಾಮಾಯಣವನ್ನು ಸತತ 2 ವರ್ಷಗಳ ಕಾಲ ಅಧ್ಯಯನ ಮಾಡಿದೆ. ನಿಜವಾದ ರಾಮ ಯಾರು ಎಂಬ ಬಗ್ಗೆ ಪತ್ತೆ ಹಚ್ಚಿದೆ. ವಾಲ್ಮೀಕಿ ಎಲ್ಲಿಯೂ ರಾಮ ದೇವರು ಎಂದು ಹೇಳುವುದಿಲ್ಲ. ರಾಮನು ನಾನು ಮನುಷ್ಯ, ದೇವರಲ್ಲ ಎಂದೇ ಹೇಳುತ್ತಾನೆ, ಎಲ್ಲರೂ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ, ಮೋಸ ಮಾಡುವವರು ಮತ್ತಷ್ಟು ಮೋಸ ಮಾಡುತ್ತಲೇ ಇರುತ್ತಾರೆ ಎಂದು ತಿಳಿಸಿದರು.
ಮಲ ಹೊರುವವರಿಗೆ 50 ಸಾವಿರ ರೂಪಾಯಿಗಳನ್ನು ಮಾಸಿಕವಾಗಿ ನೀಡಬೇಕು ಎಂದು ನಾನು ಪ್ರತಿಪಾದಿಸಿದೆ. ಆದರೆ ಕೆಲವರು ಅದಕ್ಕೆ ಆಕ್ಷೇಪಿಸಿದರು. ಹಾಗಾದರೆ ನೀವೇ ಮಲ ಹೊರಿ ಒಂದು ಲಕ್ಷ ರೂಪಾಯಿ ನೀಡುತ್ತೇವೆ ಎಂದಾಗ ಸುಮ್ಮನಾದರು ಎಂದು ಅವರು ನುಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಂ.ಆರ್.ಸೀತಾರಾಂ, ಬಸವಲಿಂಗಪ್ಪನೇರ ನಿಷ್ಠುರ ರಾಜಕಾರಣಿ. ಅಂತಹ ವ್ಯಕ್ತಿಯ ಜನ್ಮದಿನವನ್ನು ಆಡಳಿತ ನಡೆಸುವ ಸರಕಾರ ಸರಕಾರಿ ಕಾರ್ಯಕ್ರಮವಾಗಿ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ದಸಂಸ ಸಂಸ್ಥಾಪಕ ಅಧ್ಯಕ್ಷ ಎಚ್.ಮಾರಪ್ಪ, ಹೈಕೋರ್ಟ್ ವಕೀಲ ಎಚ್.ಆರ್.ವಿಶ್ವನಾಥ್, ಪೆರಿಯಾರ್ ವಿಚಾರವಾದಿ ಸಂಘಟನೆಯ ಕಲೈ ಸೆಲ್ವಿ ಸೇರಿದಂತೆ ಹಲವರು ಉಪಸ್ಥಿತರಿದ್ದು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಜನರಲ್ಲಿ ಮೇಲು ಕೀಳು ಎಂಬ ಭೇದ-ಭಾವವನ್ನು ಬಿತ್ತುತ್ತಿದ್ದು, ಜನರ ತಲೆಯಲ್ಲಿ ಜಾತಿಯ ಮಂತ್ರವನ್ನು ತುಂಬುತ್ತಿದೆ, ಕೇವಲ ಭಜನೆ ಮಾಡುವುದರಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ, ಭಜನೆ ಮಾಡುವುದು ದೇಶದ ಜನರನ್ನು ದಡ್ಡರನ್ನಾಗಿಸುತ್ತದೆ.
-ಪ್ರೊ.ಭಗವಾನ್, ಹಿರಿಯ ಸಾಹಿತಿ