ಚಿತ್ರ ನಿರ್ದೇಶಕ ಕೆ.ನಂಜುಂಡ ನಿಧನ
ಬೆಂಗಳೂರು, ಎ.23: ಚಿತ್ರನಿರ್ದೇಶಕ ಕೆ.ನಂಜುಂಡ(56) ಬಹುಅಂಗಾಂಗ ವೈಪಲ್ಯದಿಂದಾಗಿ ಇಂದು ನಿಧನರಾದರೆಂದು ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾಗಿ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜುಂಡ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೆ ಬಹುಅಂಗಾಂಗ ವೈಫಲ್ಯದಿಂದಾಗಿ ನಿಧನ ಹೊಂದಿದರೆಂದು ವೈದ್ಯರು ತಿಳಿಸಿದ್ದಾರೆ.
ಪ್ರಕಾಶ್ ರಾಜ್ ನಟಿಸಿದ್ದ ಕನಸಲೂ ನೀನೆ ಮನಸಲೂ ನೀನೆ(1998) ಮತ್ತು ರಾಜೇಶ್ ಕೃಷ್ಣನ್ ನಟಿಸಿದ್ದ ಮೆಲೋಡಿ(2015) ಚಿತ್ರಗಳನ್ನು ನಿರ್ದೇಶಿಸಿದ್ದ ನಂಜುಂಡ ಅವರು, ಚಿತ್ರಕಥೆಯಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಲೆಕ್ಕವಿಲ್ಲದಷ್ಟು ಚಿತ್ರಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದರು.
ನಂಜುಂಡ ಅವರ ಸೃಜನಶೀಲ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಳ್ಳದ ಕನ್ನಡ ಚಿತ್ರರಂಗ, ಅವರನ್ನು ಕನಿಷ್ಠ ಕೂಲಿಗೆ ದುರುಪಯೋಗಪಡಿಸಿಕೊಂಡಿದ್ದೇ ಹೆಚ್ಚು ಎನ್ನುವ ಮಾತು ಗಾಂಧಿನಗರದಲ್ಲಿ ಜನಜನಿತವಾಗಿತ್ತು. ತಮಿಳು ಚಿತ್ರೋದ್ಯಮದಲ್ಲಿ ತರಬೇತಿ ಪಡೆದು ಬಂದಿದ್ದ ನಂಜುಂಡ ಅವರು, ಚಿತ್ರರಂಗದ ಎಲ್ಲ ವಿಭಾಗಗಳನ್ನು ಶಾಸ್ತ್ರೀಯವಾಗಿ ಅರಿತವರಲ್ಲಿ ಒಬ್ಬರು ಎನಿಸಿಕೊಂಡಿದ್ದರು. ಕೆ.ನಂಜುಂಡ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.