ರಾಜ್ಯ ಮಟ್ಟದ ಮಹಿಳಾ ಕಥಾ ಸ್ಪರ್ಧೆ
ಬೆಂಗಳೂರು, ಎ. 23: ಖ್ಯಾತ ವೈದ್ಯೆ, ಕಥೆಗಾರ್ತಿ ಡಾ.ಅನುಪಮಾ ನಿರಂಜನ ಅವರ ಹುಟ್ಟುಹಬ್ಬದ ಅಂಗವಾಗಿ ಉದಯೋನ್ಮುಖ ಕಥೆಗಾರ್ತಿಯರಿಗಾಗಿ ಕನ್ನಡ ಸಂಘರ್ಷ ಸಮಿತಿಯೂ ರಾಜ್ಯ ಮಟ್ಟದ ಮಹಿಳಾ ಕಥಾ ಸ್ಪರ್ಧೆ-2019ಅನ್ನು ಆಯೋಜಿಸಿದೆ.
ಸ್ಪರ್ಧೆಗೆ ವಯಸ್ಸಿನ ಮಿತಿ ಇಲ್ಲ. ಇದುವರೆಗೆ ಒಂದೂ ಕಥಾ ಸಂಕಲನ ಪ್ರಕಟಿಸದೆ ಇರುವ ಕಥೆಗಾರ್ತಿಯರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕಥೆಯು ಸ್ವಂತ ರಚನೆಯಾಗಿದ್ದು, ಮಹಿಳಾ ಕೇಂದ್ರಿತವಾಗಿರಬೇಕು. ಕಥೆ ಈ ಮೊದಲು ಎಲ್ಲೂ ಪ್ರಕಟವಾಗಿರಬಾರದು.
ಈಗಾಗಲೇ ಪುಸ್ತಕ ರೂಪದಲ್ಲಿ ಬಂದಿರುವ, ಅನುವಾದಿತ, ಇತರ ಕಥೆಯ ನಕಲು, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕಥೆಯನ್ನು ಸ್ಪರ್ಧೆಗೆ ಕಳುಹಿಸುವಂತಿಲ್ಲ. 1200 ಪದಗಳು ಅಥವಾ ಎ-4 ಅಳತೆಯ ಕಾಗದದಲ್ಲಿ 5 ಪುಟಗಳ ಮಿತಿಯಲ್ಲಿರುವ ಕಥೆಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಕನ್ನಡದಲ್ಲಿ ಬರೆದು ಅಥವಾ ಟೈಪ್ ಮಾಡಿಸಿ ಕಳುಹಿಸಬೇಕು.
ಪ್ರವೇಶ ಶುಲ್ಕ 200ರೂ., ಕನ್ನಡ ಸಂಘರ್ಷ ಸಮಿತಿ, ಬೆಂಗಳೂರು ಹೆಸರಿಗೆ ಡಿ.ಡಿ. ಪಡೆದು ಕಥೆಯ ಜೊತೆ ಕಳುಹಿಸಬೇಕು. ಎಂ.ಒ. ಕಳುಹಿಸಲೂ ಅವಕಾಶವಿದೆ. ವಿಜೇತರಿಗೆ 2 ಸಾವಿರ ರೂ., 1,500 ರೂ. ಮತ್ತು 1 ಸಾವಿರ ರೂ. ಮೂರು ಬಹುಮಾನಗಳಿರುತ್ತವೆ.
ಕಥೆಯ ಹಾಳೆಯಲ್ಲಿ ವೈಯಕ್ತಿಕ ಮಾಹಿತಿಯನ್ನು ಬರೆಯಬಾರದು. ಪ್ರತ್ಯೇಕ ಹಾಳೆಯಲ್ಲಿ ಹೆಸರು, ವಿಳಾಸ, ವಾಟ್ಸ್ಆ್ಯಪ್ ಇರುವ ದೂರವಾಣಿ ಸಂಖ್ಯೆ, ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಕಳುಹಿಸಬೇಕು. ಇದುವರೆಗೆ ನನ್ನ ಒಂದೂ ಕಥಾ ಸಂಕಲನ ಪ್ರಕಟವಾಗಿರುವುದಿಲ್ಲ. ಕಥೆ ನನ್ನ ಸ್ವಂತ ರಚನೆಯಾಗಿದ್ದು ಅನುವಾದವಾಗಲಿ, ಬೇರೆ ಕಥೆಯ ನಕಲಾಗಲಿ ಆಗಿರುವುದಿಲ್ಲ ಎಂದು ಸ್ವಯಂ ದೃಢೀಕರಣದೊಡನೆ ಕಳುಹಿಸಬೇಕು.
ಕಥೆ ಕಳುಹಿಸಲು ಕೊನೆಯ ಮೇ 8. ವಿಳಾಸ: ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ನಂ.2, 2ನೆ ಮಹಡಿ, 1ನೆ ಮುಖ್ಯರಸ್ತೆ, 3ನೆ ಅಡ್ಡರಸ್ತೆ, ಶ್ರೀನಿಧಿ ಬಡಾವಣೆ, ಕೋಣನಕುಂಟೆ, ಬೆಂಗಳೂರು-560062. ಮೊಬೈಲ್: 94488 51781. ಇಮೇಲ್: kannadasangharshasamiti@ gmail.com ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಕೋರಿದೆ.