ಏರೋ ಶೋ ಲಕ್ನೋಗೆ ಸ್ಥಳಾಂತರಿಸಲು ಯೋಚಿಸಿದಾಗ ಶೋಭಾ ಕೇಂದ್ರಕ್ಕೆ ಪತ್ರ ಬರೆದಿಲ್ಲ ಏಕೆ: ಎಂ.ಬಿ. ಪಾಟೀಲ್ ಪ್ರಶ್ನೆ
ಬೆಂಗಳೂರು, ಎ.30: ಬಿಜೆಪಿ ಸರಕಾರವು ಬೆಂಗಳೂರಿನಲ್ಲಿ ವರ್ಷಂಪ್ರತಿ ನಡೆಯುವ ಏರೋ ಶೋ ಅನ್ನು ಲಕ್ನೋಗೆ ಸ್ಥಳಾಂತರಗೊಳಿಸಲು ಯೋಚಿಸಿದಾಗ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅದನ್ನು ವಿರೋಧಿಸಿ ಕೇಂದ್ರಕ್ಕೆ ಏಕೆ ಪತ್ರ ಬರೆಯಲಿಲ್ಲ ಎಂದು ರಾಜ್ಯ ಗೃಹ ಸಚಿವ ಎಂ.ಬಿ. ಪಾಟೀಲ್ ಪ್ರಶ್ನಿಸಿದ್ದಾರೆ.
ಬಿಜೆಪಿ ಬೆಂಬಲಿಗರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದ್ದಾರೆಂದು ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಗೃಹ ಸಚಿವ ಎಂ ಬಿ ಪಾಟೀಲ್ ಅವರ ವಿರುದ್ಧ ಆರೋಪ ಹೊರಿಸಿ ಶೋಭಾ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಲ್ಲಿಸಿದ ಎರಡು ಪುಟಗಳ ದೂರನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಪ್ರತಿಯಾಗಿ ಪಾಟೀಲ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
“ಅಲಮಟ್ಟಿ ಪುನರ್ವಸತಿಗಾಗಿ ಅನುದಾನ, ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ವಿಜಯಪುರವನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸುವುದು, ರಾಜ್ಯಕ್ಕೆ ಬುಲೆಟ್ ರೈಲು ಒದಗಿಸಲು, ಹೆಚ್ಚು ಐಐಎಂ ಹಾಗೂ ಐಐಟಿಗಳನ್ನು ಒದಗಿಸಲು ನೀವೇಕೆ ಕೇಂದ್ರಕ್ಕೆ ಪತ್ರ ಬರೆದಿಲ್ಲ ಎಂದೂ ಟ್ವೀಟ್ ಮೂಲಕ ಪ್ರಶ್ನಿಸಿದ ಪಾಟೀಲ್, ಸರಕಾರ ಏರೋ ಶೋ ಲಕ್ನೋಗೆ ಸ್ಥಳಾಂತರಿಸಲು ಯೋಚಿಸಿದಾಗ ನಿಮ್ಮ ಪತ್ರವನ್ನು ಯಾರೂ ನೋಡಿಲ್ಲ” ಎಂದು ಬರೆದಿದ್ದಾರೆ.