ಐಟಿ ಇಲಾಖೆ ಕಚೇರಿ ಎದುರು ಪ್ರತಿಭಟನೆ: ತನಿಖೆಗೆ ಆದೇಶಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್
'ಐಟಿ' ಎದುರು ಪ್ರತಿಭಟನೆ(ಫೈಲ್ ಚಿತ್ರ)
ಬೆಂಗಳೂರು, ಮೇ 2: ನಗರದ ಆದಾಯ ತೆರಿಗೆ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾಧಿಕಾರಿಗಳಿಗೆ ತನಿಖೆ ನಡೆಸಲು ಆದೇಶ ನೀಡಿದೆ.
ಈ ಕುರಿತು ತುಮಕೂರು ಜಿಲ್ಲೆಯ ಎ.ಮಲ್ಲಿಕಾರ್ಜುನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರಿದ್ದ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿದಾರ(ಪಾರ್ಟಿ ಇನ್ ಪರಷನ್) ಎ.ಮಲ್ಲಿಕಾರ್ಜುನ್ ವಾದಿಸಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿ ಇನ್ನಿತರ ಜನಪ್ರತಿನಿಧಿಗಳು ಆದಾಯ ತೆರಿಗೆ ಇಲಾಖೆ ಎದುರು ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿದರೂ ಪೊಲೀಸರು ಯಾವುದೆ ತನಿಖೆಯನ್ನು ನಡೆಸುತ್ತಿಲ್ಲ. ಎಫ್ಐಆರ್ ಕೂಡ ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ, ಪ್ರತಿಭಟನೆ ಸಂಬಂಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠವು ಕಮರ್ಷಿಯಲ್ಸ್ಟ್ರೀಟ್ ಠಾಣಾಧಿಕಾರಿಗಳಿಗೆ ತನಿಖೆಗೆ ಆದೇಶಿಸಿ, ವಿಚಾರಣೆಯನ್ನು ಜೂ.15ಕ್ಕೆ ಮುಂದೂಡಿತು.