ಮಕ್ಕಾಗೆ ಹೋಗಲು ಕೋರಿ ನಲಪಾಡ್ ಸಲ್ಲಿಸಿದ್ದ ಅರ್ಜಿ ಮುಂದೂಡಿಕೆ: ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯಲ್ಲ ಎಂದ ಹೈಕೋರ್ಟ್
ಬೆಂಗಳೂರು, ಮೇ 10: ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಹಾರಿಸ್ ಪುತ್ರ ಮುಹಮ್ಮದ್ ನಲಪಾಡ್, ಮಕ್ಕಾಗೆ ತೆರಳಲು ಜಾಮೀನು ಷರತ್ತು ಸಡಿಲಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ 'ನೀವು ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯಲ್ಲ ಎಂಬ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಅರ್ಜಿ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಿದೆ.
ಈ ಕುರಿತು ಮುಹಮ್ಮದ್ ನಲಪಾಡ್ ಮೆಕ್ಕಾಗೆ ತೆರಳಲು ಜಾಮೀನು ಷರತ್ತು ಸಡಿಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ನಲಪಾಡ್ ಪರ ವಕೀಲರು, ಮುಹಮ್ಮದ್ ನಲಪಾಡ್ ಅವರು 20 ದಿನಗಳ ಕಾಲ ಮಕ್ಕಾಗೆ ತೆರಳುತ್ತಿದ್ದಾರೆ. ಹೀಗಾಗಿ, ಜಾಮೀನು ಷರತ್ತನ್ನು ಸಡಿಲಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ನಲಪಾಡ್ ವಿರುದ್ಧ ಏನು ಆರೋಪಗಳಿವೆ ಎಂದು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು, 307(ಕೊಲೆ ಗೆ ಯತ್ನ) ಉತ್ತರಿಸಿದರು. ನೀವು ಮಾಡಿರುವ ಪಾಪ ಎಲ್ಲಿಗೆ ಹೋದರೂ ಕಳೆಯಲ್ಲ ಬಿಡಿ ಎಂದು ನಲಪಾಡ್ಗೆ ಚಾಟಿ ಬೀಸಿದರು. ಅಲ್ಲದೆ, ಸರಕಾರಿ ವಕೀಲರು ಬಂದು ಆಕ್ಷೇಪಣೆ ಇಲ್ಲವೆಂದು ಹೇಳಲಿ ನಂತರ ಪರಿಶೀಲಿಸುತ್ತೇನೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.