ವಲಸೆ ಮಕ್ಕಳನ್ನು ಸೆಳೆಯಲು ಖಾಸಗಿ ಶಾಲೆಗಳ ಪ್ರಯತ್ನ
ಬೆಂಗಳೂರು, ಮೇ 14: ಸಿಲಿಕಾನ್ ಸಿಟಿಗೆ ರಾಜ್ಯ ಹಾಗೂ ದೇಶದ ವಿವಿಧ ಮೂಲೆಗಳಿಂದ ವಲಸೆ ಬರುವ ಕುಟುಂಬಗಳ ಮಕ್ಕಳನ್ನು ಶಾಲೆಗಳಿಗೆ ಸೇರಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದು, ಹಲವು ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿವೆ.
ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವ ಉದ್ದೇಶದಿಂದ ರಾಜ್ಯದ ಬೀದರ್, ರಾಯಚೂರು, ಮಧ್ಯ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಜಿಲ್ಲೆಗಳು ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ಹೊರ ರಾಜ್ಯಗಳಿಂದ ಪ್ರತಿ ವರ್ಷ ನೂರಾರು ಪೋಷಕರು ನಗರಕ್ಕೆ ಬರುತ್ತಾರೆ. ಅಲ್ಲದೆ, ಮಗುವಿನ ಶಾಲೆಗೆ ಹತ್ತಿರದಲ್ಲೇ ಮನೆಗಳನ್ನು ಸ್ಥಳಾಂತರಿಸುವವರು ಇದ್ದಾರೆ. ಇಂತಹವರನ್ನು ತಲುಪಲು ಖಾಸಗಿ ಶಾಲೆಗಳು ತೀವ್ರ ಪೈಪೋಟಿ ನಡೆಸುತ್ತಿವೆ.
ಪ್ರತಿ ವರ್ಷ 1.5 ಲಕ್ಷ ಪ್ರವೇಶ: ನಗರದಲ್ಲಿ ಪ್ರತಿ ವರ್ಷ ನರ್ಸರಿಯಿಂದ 1 ನೆ ತರಗತಿಗೆ ಒಂದೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಸೇರುತ್ತಾರೆ. ನಗರ ವ್ಯಾಪ್ತಿಯಲ್ಲಿ 5,500 ಕ್ಕೂ ಅಧಿಕ ಶಾಲೆಗಳಿದ್ದು, ಅದರಲ್ಲಿ 1 ಸಾವಿರ ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳಿವೆ. ಎರಡು ಸಾವಿರ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ.
ಮುಂಗಡ ಬುಕ್ಕಿಂಗ್: ಬಹುತೇಕ ಖಾಸಗಿ ಶಾಲೆಗಳಲ್ಲಿ ಶಾಲಾ ವಾಹನ ಇರುತ್ತದೆ. ಶಾಲಾ ವಾಹನಗಳು ಕೆಲವೊಂದು ಮಾರ್ಗದಲ್ಲಿ ಓಡಾಡುವುದಿಲ್ಲ ಹಾಗೂ ಕೆಲವು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಲು ವಿಳಂಬವಾಗುವುದರಿಂದ ಅಂತಹವರಿಗೆ ಶಾಲಾ ವಾಹನವು ಸಿಗುವುದಿಲ್ಲ. ಹೀಗಾಗಿ ಬಹುತೇಕರು ಶಾಲಾ ವಾಹನಗಳನ್ನು ಮುಂಗಡವಾಗಿಯೇ ಕಾಯ್ದಿರಿಸಿಕೊಂಡಿರುತ್ತಾರೆ. ಶಾಲೆಗೆ ಕರೆದುಕೊಂಡು ಹೋಗಲು ಮತ್ತು ವಾಪಾಸ್ ಮನೆಗೆ ಬಿಡಲೆಂದೇ ಕೆಲವು ಖಾಸಗಿ ವಾಹನಗಳು, ರಿಕ್ಷಾ, ಓಮ್ನಿ ವ್ಯಾನ್ಗಳಿವೆ. ಅವುಗಳನ್ನು ಪಾಲಕ, ಪೋಷಕರು ಮುಂಗಡ ಬುಕಿಂಗ್ ಮಾಡಿರುತ್ತಾರೆ.
ತಂತ್ರಜ್ಞಾನ ಆಧರಿತ ಸೇವೆ: ಕೆಲವು ಪ್ರತಿಷ್ಠಿತ ಶಾಲೆಗಳು ಮಕ್ಕಳ ಸುರಕ್ಷತೆಗಾಗಿ ಮುಂದುವರಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಿವೆ. ಮಗು ವಾಹನ ಏರಿದ ತಕ್ಷಣ ಪೋಷಕರ ಮೊಬೈಲ್ಗೆ ಸಂದೇಶ ರವಾನೆ ಆಗುತ್ತದೆ. ಜಿಪಿಎಸ್ ವ್ಯವಸ್ಥೆ ಅಳವಡಿಕೆಯಿಂದ ವಾಹನದ ಚಲನ-ವಲನ ಗೊತ್ತಾಗುತ್ತದೆ. ಶಾಲಾ ಆಡಳಿತಕ್ಕೂ ಈ ಮಾಹಿತಿ ತಲುಪುತ್ತದೆ.