ದೇಶದ ಹಿತಕ್ಕೆ ಬಿಜೆಪಿ ಮಾರಕ: ದಿನೇಶ್ ಗುಂಡೂರಾವ್
"ಶಾ, ಮೋದಿ ದೇಶಭಕ್ತರಾಗಿದ್ದರೆ ಪ್ರಜ್ಞಾರನ್ನು ಪಕ್ಷದಿಂದ ಉಚ್ಛಾಟಿಸಲಿ"
ಬೆಂಗಳೂರು, ಮೇ 16: ನಾಥೂರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿರುವ, ಸಾಧ್ವಿ ಪ್ರಜ್ಞಾ ರಂತಹ ಭಯೋತ್ಪಾದಕ ಹಿನ್ನೆಲೆಯುಳ್ಳ ಜನರನ್ನು ಶಾಸನ ಸಭೆಗೆ ಕಳಿಸಲು ಟಿಕೆಟ್ ನೀಡಿರುವ ಬಿಜೆಪಿಯವರು, ದೇಶದ ಹಿತಕ್ಕೆ ಮತ್ತು ಜೀವಪರತೆಗೆ ವಿರುದ್ಧವಾಗಿದ್ದಾರೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬಹುದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವಿಟ್ ಮಾಡಿದ್ದಾರೆ.
ಮೋದಿಯವರ ನೆಚ್ಚಿನ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್, ಗಾಂಧಿ ಹಂತಕ ಗೋಡ್ಸೆಯನ್ನು ದೇಶಭಕ್ತ ಎಂದಿದ್ದಾರೆ. ಆ ಮೂಲಕ ಮಹಾತ್ಮ ಗಾಂಧಿ, ಅಹಿಂಸಾ ತತ್ವ, ಸ್ವಾತಂತ್ರ ಹೋರಾಟಗಾರರ ಬಲಿದಾನಗಳಿಗೆ ಅಪಮಾನ ಮಾಡಿದ್ದಾರೆ. ಬಿಜೆಪಿ, ಅಮಿತ್ ಶಾ ಮತ್ತು ನರೇಂದ್ರಮೋದಿ ಅಸಲಿ ದೇಶಭಕ್ತರಾಗಿದ್ದರೆ ಪ್ರಜ್ಞಾರನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಶೋಭಾ ವಿರುದ್ಧ ಕಿಡಿ: ಒಬ್ಬ ಮಹಿಳೆಯಾಗಿ ಬಳೆ ತೊಟ್ಟ ಮಹಿಳೆ ದೌರ್ಬಲ್ಯದ ಸಂಕೇತ ಎಂದು ಬಿಂಬಿಸುವುದು ಮಹಿಳೆಯರನ್ನ ಅವಮಾನಿಸಿದ ಹಾಗೆ. ಇಂತಹ ಹೇಳಿಕೆ ಶೋಭಾ ಕರಂದ್ಲಾಜೆ ಅವರಿಗೆ ಶೋಭೆ ತರುವುದಿಲ್ಲ ಎಂದು ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.
ಐದು ವರ್ಷ ಅಭಿವೃದ್ಧಿ ಪರವಾದ, ಭ್ರಷ್ಟಾಚಾರ ರಹಿತ, ಸುಭದ್ರ ಆಡಳಿತ ನೀಡಿದವರು ಸಿದ್ದರಾಮಯ್ಯನವರು. ಶೋಭಾ ಅವರೇ, ಸಂಸದೆಯಾಗಿ ರಾಜ್ಯಕ್ಕೆ ನಿಮ್ಮ ಕೊಡುಗೆ ಶೂನ್ಯ. ಒಂದು ಅವಧಿಗೆ ಮೂರು ಮುಖ್ಯಮಂತ್ರಿಗಳು, ಮುಖ್ಯಮಂತ್ರಿಯೇ ಜೈಲು ಸೇರಿದ್ದು ನಿಮ್ಮ ಬಿಜೆಪಿ ಆಡಳಿತದ ಅವಧಿಯಲ್ಲಿ. ಬಳೆಗಳನ್ನು ನಿಮ್ಮ ಚೋರ್ ಚೌಕಿದಾರರಿಗೆ ಕಳುಹಿಸಿಕೊಡಿ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ ಮಾಡಿದೆ.