ಬೆಂಗಳೂರು: ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಮೃತ್ಯು
ಬೆಂಗಳೂರು, ಮೇ 20: ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ವಿದ್ಯುತ್ ತಂತಿ ತಗುಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಮೃತಪಟ್ಟಿದ್ದಾನೆ.
ಮತ್ತಿಕೆರೆಯ ರಮಾದೇವಿ ಮತ್ತು ಅಂಬರೀಶ್ ದಂಪತಿಯ ಪುತ್ರ ನಿಖಿಲ್(14) ಮೃತ ಬಾಲಕನಾಗಿದ್ದು, ಈತ ಯಲಹಂಕದ ದೆಹಲಿ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಗೆ ಪ್ರವೇಶ ಪಡೆದಿದ್ದ ಎಂದು ತಿಳಿದುಬಂದಿದೆ.
ಏನಿದು ಘಟನೆ?: ಐದು ದಿನಗಳ ಹಿಂದೆ ನಗರದ ಮತ್ತಿಕೆರೆಯ ನೇತಾಜಿ ವೃತ್ತದ ಮನೆ ಬಳಿ ಸ್ನೇಹಿತರೊಡನೆ ನಿಖಿಲ್ ಆಟ ಆಡುವಾಗ ಕಟ್ಟಡದ ಮೊದಲ ಮಹಡಿಗೆ ಚೆಂಡು ಹೋಗಿದ್ದು, ಈ ವೇಳೆ ಅದನ್ನು ತರಲು ಹೋಗಿದ್ದ ನಿಖಿಲ್ ತಂತಿ ತುಳಿದು ಕೆಳಗೆ ಬಿದ್ದಿದ್ದಾನೆ.
ತಕ್ಷಣ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಖಿಲ್ ದೇಹ ಶೇ.40 ರಷ್ಟು ಸುಟ್ಟುಹೋಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರವಿವಾರ ರಾತ್ರಿ ಆತ ಮೃತಪಟ್ಟಿದ್ದಾನೆ ಎಂದು ನಿಖಿಲ್ ಕುಟುಂಬ ಮೂಲಗಳು ತಿಳಿಸಿವೆ.