ಚುನಾವಣೆ ಫಲಿತಾಂಶದ ಬಗ್ಗೆ ರಾಜ್ಯ ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು, ಮೇ 23: ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೇರಲು ರೆಡಿಯಾಗಿದೆ. ಫಲಿತಾಂಶದ ಬಗ್ಗೆ ರಾಜ್ಯ ರಾಜಕೀಯ ನಾಯಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ...
ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ?
-ಕೆ.ಎಸ್.ಈಶ್ವರಪ್ಪ, ಬಿಜೆಪಿ ಶಾಸಕ
ಕುವೆಂಪು ಸಂದೇಶ ಪಾಲಿಸಲಿ
ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಮತ್ತು ಮುಖ್ಯ ಪಾತ್ರವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಮುಂದಿನ 5 ವರ್ಷ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ ಸರ್ವಜನಾಂಗ ಶಾಂತಿಯ ತೋಟವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಅಭಿನಂದನೆ; ಸೋಲಿನ ಕುರಿತು ಚರ್ಚೆ
ಲೋಕಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ. ಈ ಫಲಿತಾಂಶ ಗೌರವಿಸುತ್ತೇನೆ. ರಾಜ್ಯದಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೆ ನನ್ನ ಶುಭಾಶಯಗಳು. ಹಾಗೂ ಮತ್ತೊಮ್ಮೆ ಜನಾದೇಶ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ. ಮೈತ್ರಿ ಅಭ್ಯರ್ಥಿಗಳ ಸೋಲಿನ ಕುರಿತು ಎರಡು ಪಕ್ಷ ನಾಯಕರು ಚರ್ಚಿಸುತ್ತೇವೆ.
-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ತಲೆಬಾಗುತ್ತೇನೆ
ಜನಾದೇಶಕ್ಕೆ ನಾನು ತಲೆಬಾಗುತ್ತೇನೆ. ಇಡೀ ದೇಶದಲ್ಲಿ ಅವರ ಮ್ಯಾಜಿಕ್ ನೆಡೆದಿದೆ. ನನ್ನ ಸೋಲಿಸಲು ಷಡ್ಯಂತ್ರ ನಡೆದಿದೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುವೆ.
-ಕೆ.ಎಚ್.ಮುನಿಯಪ್ಪ, ಪರಾಜಿತ ಸಂಸದ
ಬಿಜೆಪಿ ಗೆಲುವಿಗೆ ಕಾರಣವೇನು ಎಂಬುದನ್ನು ಆ ಪಕ್ಷದವರೇ ಹೇಳಬೇಕು. ನಾವು ಜಾತಿ, ಧರ್ಮದ ಮೇಲೆ ಚುನಾವಣೆ ಮಾಡಲಿಲ್ಲ. ಹೀನಾಯ ಸೋಲು ಕುರಿತು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
-ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕ
ಮಾತದಾರರ ತೀರ್ಪು
ಮತದಾರರ ತೀರ್ಪನ್ನು ತಲೆ ಭಾಗಿ ಸ್ವೀಕರಿಸುತ್ತೇವೆ. ಮೈತ್ರಿ ಸೋಲಿನ ಹೊಣೆಯನ್ನು ಎರಡು ಪಕ್ಷಗಳು ಹೊತ್ತುಕೊಳ್ಳುತ್ತೇವೆ.
-ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ಕ್ಷಮೆ ಕೇಳಬೇಕು
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ಜೆಡಿಎಸ್, ಕಾಂಗ್ರೆಸ್ ನಾಯಕರಿಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮೋದಿಯವರನ್ನು ಟೀಕಿಸಿದ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ಬಹಿರಂಗವಾಗಿ ಕ್ಷಮೆ ಕೇಳಬೇಕು.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಎಲ್ಲರಿಗೂ ಅಭಿನಂದನೆ ನಾನು ತುಂಬಾ ಸಾಧನೆ ಮಾಡಿದ್ದೇನೆ. ಇಡೀ ರಾಜ್ಯದ ಜನತೆ ನನ್ನ ಗೆಲುವಿಗೆ ಹಾರೈಸಿದ್ದಾರೆ. ನನ್ನನ್ನು ಆಶೀರ್ವದಿಸಿದ ಎಲ್ಲ ಮತದಾರರಿಗೂ ಅಭಿನಂದನೆಗಳು. ನನ್ನ ಜತೆ ಶ್ರಮಿಸಿದ ನಟರಾದ ದರ್ಶನ್ ಮತ್ತು ಯಶ ಅವರಿಗೆ ಚಿರಋಣಿ. ನನ್ನ ಗೆಲುವು ರಾಜ್ಯದ ಜನತೆಗೆ ಅರ್ಪಣೆ.
-ಸುಮಲತಾ, ಮಂಡ್ಯ ಕ್ಷೇತ್ರದ ವಿಜೇತ ಅಭ್ಯರ್ಥಿ
ಮೋದಿ-ಶಾಗೆ ಧನ್ಯವಾದ
ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದ ಪ್ರಧಾನಿ ಮೋದಿಯವರಿಗೆ, ಅಮಿತ್ ಶಾ, ಯಡಿಯೂರಪ್ಪನವರಿಗೆ ಧನ್ಯವಾದಗಳು. ನನ್ನನ್ನು ಆಶೀರ್ವದಿಸಿದ ಎಲ್ಲ ಮತದಾರರಿಗೆ ಧನ್ಯವಾದ. ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದವರಿಗೆಲ್ಲ ಈ ಗೆಲುವು ಅರ್ಪಣೆ.
-ತೇಜಸ್ವಿ ಸೂರ್ಯ, ವಿಜೇತ ಅಭ್ಯರ್ಥಿ
‘ಮಾತುಕತೆ ಮಾಡಿಲ್ಲ’
ಪಕ್ಷದ ಮುಖಂಡರಿಗೆ ಗೌರವ ಕೊಟ್ಟು ಉಪಚುನಾವಣೆಗೆ ಶಿವರಾಮೇಗೌಡರಿಗೆ ಬೆಂಬಲ ಸೂಚಿಸಲಾಗಿತ್ತು. ಇಷ್ಟಾದರೂ ಕುಮಾರಸ್ವಾಮಿ ನಮ್ಮನ್ನು ಕರೆದು ಮಾತುಕತೆ ಮಾಡಿಲ್ಲ. ಮಾತನಾಡಿಸದೇ ನಾನು ಹೇಗೆ ಪ್ರಚಾರಕ್ಕೆ ಹೋಗಲಿ. ಮಂಡ್ಯದ ಸೋಲಿನ ಹೊಣೆಯನ್ನು ಕುಮಾರಸ್ವಾಮಿ ಅವರೇ ಹೊತ್ತುಕೊಳ್ಳಬೇಕು. ಸುಮಲತಾ ಮಂಡ್ಯ ಜಿಲ್ಲೆಯ ಜನರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
-ಚೆಲುವರಾಯಸ್ವಾಮಿ, ಕಾಂಗ್ರೆಸ್ ಮುಖಂಡ