ಶಿಕ್ಷಕರ ನೇಮಕಾತಿಯಿಂದ ವಂಚಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ: ಆರೋಪ
ಬೆಂಗಳೂರು, ಮೇ 24: ಡಿಎಡ್ ಮತ್ತು ಬಿಎಡ್ ಪದವಿ ಪಡೆಯುವುದರೊಂದಿಗೆ ಟಿಇಟಿ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿಯಿಂದ ವಂಚಿಸುತ್ತಿದೆ ಎಂದು ನೇಮಕಾತಿಯಿಂದ ವಂಚಿತರಾದ ಅಭ್ಯರ್ಥಿ ಲಕ್ಷ್ಮೀನಾರಾಯಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಶಿಕ್ಷಣ ಇಲಾಖೆ 10,611 ಶಿಕ್ಷಕರ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ನೇಮಕಾತಿಯು ಅನೇಕ ಗೊಂದಲಗಳಿಂದ ಕೂಡಿದ. ಅವೈಜ್ಞಾನಿಕ ನಿಯಮಗಳನ್ನು ಒಳಗೊಂಡಿದೆ. ಅಧಿಸೂಚನೆಯಂತೆ ಸುಮಾರು 20 ಸಾವಿರಕ್ಕಿಂತ ಹೆಚ್ಚು ಅಭ್ಯರ್ಥಿಗಳು ನೇಮಕಾತಿಯಿಂದ ವಂಚಿತರಾಗಿದ್ದಾರೆ ಎಂದರು.
ಅಧಿಸೂಚನೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಲು ಪದವಿಯಲ್ಲಿ ಪಿಸಿಎಂ ಕಲಿತಿರಬೇಕು ಎಂಬ ನಿಯಮವಿದೆ. ಆದರೆ ಆರ್ಟ್ ಪದವಿಯಲ್ಲಿ ನಾಲ್ಕು ಐಚ್ಛಿಕ ವಿಷಯಗಳಲ್ಲಿ ಯಾವುದಾದರು ಎರಡು ವಿಷಯಗಳು ಎನ್ನುತ್ತಾರೆ. ಇಂಗ್ಲಿಷ್ ಶಿಕ್ಷಕರಾಗಲು ಐಚ್ಛಿಕ ವಿಷಯಗಳನ್ನು ಒಳಗೊಳಿಸಲಾಗಿದೆ. ಆದರೆ ಇಂಗ್ಲಿಷ್ ಶಿಕ್ಷಕರಾಗಲು ಐಚ್ಛಿಕ ವಿಷಯಗಳು ಏಕೆ ಬೇಕು. ಇದರಿಂದ ಅನೇಕ ಶಿಕ್ಷಕರು ನೇಮಕಾತಿಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಇದೇ ಮೇ 27 ರಂದು ಅಭ್ಯರ್ಥಿಗಳೆಲ್ಲ ಸೇರಿ ಈ ಅಧಿಸೂಚನೆಯ ವಿರುದ್ಧ ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.