ರಾಜ್ಯ ರಾಜಧಾನಿಯಲ್ಲಿ ಮಳೆಯ ಆರ್ಭಟ: ನೆಲಕ್ಕುರಳಿದ ಹತ್ತಾರು ಮರಗಳು
ಬೆಂಗಳೂರು, ಮೇ 26: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಭಾರೀ ಗಾಳಿ ಸಹಿತ ಮಳೆ ಸುರಿದ ಪರಿಣಾಮ, 30ಕ್ಕೂ ಅಧಿಕ ಮರಗಳು ನೆಲಕ್ಕುರಳಿವೆ.
ಶುಕ್ರವಾರ ಸಂಜೆಯೂ ನಗರದಲ್ಲಿ ಮಳೆಯಾಗಿತ್ತು. ಆದರೆ, ಹೆಚ್ಚಿನ ಹಾನಿ ಉಂಟಾಗಿರಲಿಲ್ಲ. ಶನಿವಾರ ಮಳೆ ಸುರಿದ ವೇಳೆ ಗಾಳಿ ವೇಗವಾಗಿ ಬೀಸಿದ್ದರಿಂದ ಮರಗಳು ಬುಡಸಮೇತ ಉರುಳಿಬಿದಿದ್ದು, ಕೆಲ ಕಡೆ, ಮರಗಳ ರೆಂಬೆಗಳು ಹೆಚ್ಚಿನ ಪ್ರಮಾಣದಲ್ಲಿ ಮುರಿದು ಬಿದ್ದಿವೆ.
ರಾಜಭವನ ಬಳಿಯ ಅಲಿ ಆಸ್ಗರ್ ರಸ್ತೆ, ಮಾರುತಿ ಸೇವಾನಗರ, ನೃಪತುಂಗ ರಸ್ತೆ, ಬಿಟಿಎಂ ಲೇಔಟ್ 2ನೇ ಹಂತ, ತ್ಯಾಗರಾಜನಗರ, ವಸಂತನಗರ, ಪೀಣ್ಯ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ಮಾಗಡಿ ರಸ್ತೆ, ರಾಜಾಜಿನಗರ ಎನ್ ಬ್ಲಾಕ್ನಲ್ಲಿ ಸೇರಿದಂತೆ ತಲಾ ಒಂದೊಂದು ಮರಗಳು ನೆಲಕ್ಕುರುಳಿವೆ.
ಇಲ್ಲಿನ ಮೆಜೆಸ್ಟಿಕ್ ರೈಲು ನಿಲ್ದಾಣದ ಬಳಿ ಮರಗಳು ಪಾದಚಾರಿ ಮಾರ್ಗದ ಮೇಲೆ ಬಿದ್ದ ಪರಿಣಾಮ ಜನರು ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ಉಂಟಾಗಿತ್ತು. ಅದೇ ರೀತಿ, ರೇಸ್ ಕೋರ್ಸ್ ರಸ್ತೆಯಲ್ಲಿ ಆಟೊಗಳ ಮೇಲೆ ಮರದ ರಂಬೆ ಕೊಂಬೆಗಳು ಬಿದ್ದ ಕಾರಣ, ಹಲವು ವಾಹನಗಳು ಜಖಂ ಆಗಿವೆ. ಅಲ್ಲದೇ, ವಿಜಯನಗರದಲ್ಲಿ ಸಾಲು ಸಾಲಾಗಿ ಮರಗಳು ಬಿದ್ದಿರುವ ದೃಶ್ಯ ಕಂಡು ಬಂದಿದೆ. ಆದಿಚುಂಚನಗಿರಿ ಮಠದ ರಸ್ತೆ, ಕ್ಲಬ್ ರಸ್ತೆ, ಅತ್ತಿಗುಪ್ಪೆ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಆರ್ಪಿಸಿ ಲೇಔಟ್ 5ನೇ ಮುಖ್ಯ ರಸ್ತೆ, 10ನೇ ಕ್ರಾಸ್ನಲ್ಲಿ ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ, ಮರದ ಜೊತೆ ವಿದ್ಯುತ್ ಕಂಬ ಕೂಡ ನೆಲಕ್ಕುರುಳಿದ ಕಾರಣ ಆ ಭಾಗದಲ್ಲಿ ವಿದ್ಯುತ್ ಕಡಿತ ಮಾಡಲಾಗಿತ್ತು. ಹಲವು ಕಡೆ ಸ್ಥಳೀಯರು ಹಾಗೂ ಬಿಬಿಎಂಪಿಯ ಅರಣ್ಯ ವಿಭಾಗದ ಸಿಬ್ಬಂದಿ, ಮರವನ್ನು ತೆರವುಗೊಳಿಸಿ ಕಾರುಗಳನ್ನು ಹೊರತೆಗೆದರು. ಕೆಲ ರಸ್ತೆಯ ಒಂದೇ ಬದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದರಿಂದ ದಟ್ಟಣೆ ಉಂಟಾಗಿ, ಸವಾರರು ಪಡಿಪಾಟಲು ಅನುಭವಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯ ದ್ವಾರದ ಎದುರಿನ ರಸ್ತೆ ಮೇಲೆಯೇ ಮೂರು ಅಡಿಯಷ್ಟು ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ರಸ್ತೆಯ ಅಕ್ಕಪಕ್ಕದ ಕಟ್ಟಡಗಳ ನೀರು ಸರಾಗವಾಗಿ ಹರಿದುಹೋಗಲು ಕಾಲುವೆ ಇಲ್ಲ. ಹೀಗಾಗಿ ಮಳೆ ಬಂದಾಗಲೆಲ್ಲ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಅದೇ ನೀರು ಕಬ್ಬನ್ ಉದ್ಯಾನದೊಳಗೆ ಹರಿದು ಹೋಗುತ್ತಿದೆ.
ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಬಸವೇಶ್ವರನಗರ, ವಿಜಯನಗರ, ಕೆಂಗೇರಿ, ಹೊಸಕೆರೆಹಳ್ಳಿ, ಜ್ಞಾನಭಾರತಿ, ಪೀಣ್ಯ, ಯಶವಂತಪುರ, ಮಡಿವಾಳ, ಎಚ್.ಎಸ್.ಆರ್ ಲೇಔಟ್, ಕೋರಮಂಗಲ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ವಸಂತನಗರ, ಜಯನಗರ, ತ್ಯಾಗರಾಜನಗರ, ಬಸವನಗುಡಿ, ರಾಜರಾಜೇಶ್ವರಿನಗರ ಹಾಗೂ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಒಟ್ಟಾರೆಯಾಗಿ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಿದ್ದ ಸಾರ್ವಜನಿಕರ ಸಂಖ್ಯೆ ಹೆಚ್ಚಿತ್ತು. ಅದೇ ವೇಳೆಯೇ ಗಾಳಿ ಸಹಿತ ಜೋರು ಮಳೆಯಾಗಿದ್ದರಿಂದ ಅವರಿಗೆ ಮನೆ ತಲುಪಲು ತೊಂದರೆ ಉಂಟಾಯಿತು.