ಬೆಂಗಳೂರು: ವಿದ್ಯುತ್ ತಂತಿ ತಗುಲಿ ಮತ್ತೊರ್ವ ಮೃತ್ಯು
ಬೆಂಗಳೂರು, ಮೇ 26: ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊರ್ವ ಮೃತಪಟ್ಟಿರುವ ದುರ್ಘಟನೆ ಕಾಕ್ಸ್ಟೌನ್ ನಗರದ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಕಾಕ್ಸ್ಟೌನ್ ರಾಮಚಂದ್ರಪ್ಪ ಗಾರ್ಡ್ನ ನಿವಾಸಿ ಸತೀಶ್(35) ಮೃತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಮಳೆ ಸುರಿದ ಪರಿಣಾಮ, ಮನೆ ಬಳಿ ತೆಂಗಿನ ಮರದ ಕೊಂಬೆಯೊಂದು ಬಿದ್ದು, ಮನೆಯ ವಿದ್ಯುತ್ ಸಂಪರ್ಕ ತಂತಿ ಕೆಳಗೆ ಬಿದ್ದಿದೆ. ಅದನ್ನು ಗಮನಿಸಿದೆ, ಸತೀಶ್ ಅವರು ತುಳಿದಾಗ, ವಿದ್ಯುತ್ ದೇಹಕ್ಕೆ ಹರಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಮೃತ್ಯು: ಇತ್ತೀಚಿಗೆ ಸುದ್ದಗುಂಟೆಪಾಳ್ಯದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸಿ ಯುವಕ ರಮೇಶ್ (20) ಮೃತಪಟ್ಟಿದ್ದರು.
ಅದೇ ರೀತಿ, ಮತ್ತಿಕೆರೆ ನೇತಾಜಿ ನಗರದಲ್ಲಿ ಮನೆ ಮಹಡಿ ಮೇಲೆ ಚಂಡು ತರಲು ಹೋಗಿದ್ದ ಬಾಲಕ ನಿಖಿಲ್ (14) ಹೈಟೆನ್ಷನ್ ವೈರ್ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿಖಿಲ್, ಚಿಕಿತ್ಸೆ ಫಲಿಸದೆ ಮೇ 20ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈಗ ಹೈಟೆನ್ಷನ್ ವೈರ್ಗೆ ಮತ್ತೊಬ್ಬ ವ್ಯಕ್ತಿ ಬಲಿಯಾದಂತಾಗಿದೆ.
5 ಲಕ್ಷ ಪರಿಹಾರ ಘೋಷಣೆ
ಮೃತ ಸತೀಶ್ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರೂ.ಪರಿಹಾರವನ್ನು ಮೇಯರ್ ಗಂಗಾಂಬಿಕಾ ಮಲ್ಲಿಕಾರ್ಜುನ ಘೋಷಣೆ ಮಾಡಿದ್ದಾರೆ. ರವಿವಾರ ಸತೀಶ್ ಕುಟುಂಬಸ್ಥರಿಗೆ ಸ್ವಾಂತನ ಹೇಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.