ಅತೃಪ್ತ ಶಾಸಕರ ಜೊತೆ ಗೋವಾಗೆ ಹೋಗುತ್ತಿಲ್ಲ: ಶಾಸಕ ಮಹೇಶ್ ಕಮಟಳ್ಳಿ
ಬೆಂಗಳೂರು, ಮೇ 26: ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವಂತೆ ನಾನು ಯಾವುದೇ ಅತೃಪ್ತ ಶಾಸಕರ ಜೊತೆ ಗೋವಾ ರಾಜ್ಯಕ್ಕೆ ಹೋಗುತ್ತಿಲ್ಲ. ನನ್ನ ವಿರುದ್ಧ ಊಹಾಪೋಹದ ಸುದ್ದಿಗಳನ್ನು ಮಾಡಬೇಡಿ ಎಂದು ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕಮಟಳ್ಳಿ ತಿಳಿಸಿದರು.
ರವಿವಾರ ನಗರದ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ನೋಡಿ, ನನ್ನ ಕ್ಷೇತ್ರದ ಜನರು ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಪದೇ ಪದೇ ಅಸಮಾಧಾನದ ವಿಚಾರವನ್ನು ಪ್ರಸ್ತಾಪ ಮಾಡಬೇಡಿ ಎಂದು ಮನವಿ ಮಾಡಿದರು.
ಕೃಷ್ಣ ನದಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಈ ವಿಚಾರದ ಕುರಿತು ಚರ್ಚಿಸಲು ಬೆಂಗಳೂರಿಗೆ ಬಂದಿದ್ದೇನೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಅವರು ಹೇಳಿದರು.
ಒಂದು ತಿಂಗಳಿನಿಂದ ನಾನು ನೀರಿಗಾಗಿ ಹೋರಾಟ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನ ನೀರಿಲ್ಲದೆ ಪರದಾಡುತ್ತಿದ್ದಾರೆ. ಸದ್ಯಕ್ಕೆ ನನ್ನ ಮುಂದೆ ಇರುವ ಗುರಿ ಕೃಷ್ಣ ನದಿಗೆ ನೀರು ಹರಿಸುವುದು ಅಷ್ಟೇ. ಆದುದರಿಂದ, ನನ್ನ ಬಗ್ಗೆ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಮಾಡಬೇಡಿ ಎಂದು ಮಹೇಶ್ ಕಮಟಳ್ಳಿ ಕೋರಿದರು.