ಗಿರೀಶ್ ಕಾರ್ನಾಡ್ ನಿಧನ: ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ ‘ವಿಕೃತರು’
ಈ ಬಾರಿಯಾದರೂ ಕ್ರಮ ಕೈಗೊಳ್ಳಬಹುದೇ ಪೊಲೀಸ್ ಇಲಾಖೆ?
ಬೆಂಗಳೂರು, ಜೂ.10: ಹಿರಿಯ ರಂಗಕರ್ಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗುತ್ತಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಕೃತರು ಎಂದಿನಂತೆ ತಮ್ಮ ಚಾಳಿ ಮುಂದುವರಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಲವರು ಗಿರೀಶ್ ಕಾರ್ನಾಡ್ ನಿಧನದ ಸುದ್ದಿ ಕೇಳಿ ಸಂಭ್ರಮಾಚರಿಸಿದ್ದಲ್ಲದೆ, ಅವರನ್ನು ನಿಂದಿಸಿದ್ದಾರೆ. ಸದಾ ಕೋಮುದ್ವೇಷದ ಬರಹಗಳನ್ನು ಪೋಸ್ಟ್ ಮಾಡುವ ವೀರ ಕೇಸರಿ ಫೇಸ್ ಬುಕ್ ಪೇಜ್ ನಲ್ಲಿ ‘ಕೊನೆಗೂ ಮಣ್ಣಲ್ಲಿ ಮಣ್ಣಾದ ನಗರ ನಕ್ಸಲ’ ಎಂದು ಬರೆಯಲಾಗಿದೆ.
ಇದೇ ಮೊದಲೇನಲ್ಲ
ಈ ವಿಕೃತರು ಸಾವನ್ನು ಸಂಭ್ರಮಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಅನಂತಮೂರ್ತಿಯವರು ನಿಧನರಾದಾಗ, ಗೌರಿ ಲಂಕೇಶ್ ರನ್ನು ಹತ್ಯೆಗೈದಾಗಲೂ ಸಂಭ್ರಮಿಸಿ, ಪಟಾಕಿಗಳನ್ನು ಸಿಡಿಸಿದ್ದರು.
ಕ್ರಮ ಕೈಗೊಳ್ಳಲು ವಿಫಲ
ಈ ಹಿಂದೆ ಅನಂತಮೂರ್ತಿ, ಗೌರಿ ಲಂಕೇಶ್ ಸಾವನ್ನು ಸಂಭ್ರಮಿಸಿದಾಗ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾರಿ ಒತ್ತಾಯ ಕೇಳಿಬಂದಿದ್ದರೂ, ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಅಲ್ಲದೆ, ವೀರ ಕೇಸರಿ ಎನ್ನುವ ಪೇಜ್ ಹಲವು ಬಾರಿ ಕೋಮುಪ್ರಚೋದಕ ಪೋಸ್ಟ್ ಗಳನ್ನು ಹಾಕಿದ್ದು, ಈ ಬಗ್ಗೆ ಹಲವು ಬಾರಿ ವರದಿಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ದುಷ್ಕರ್ಮಿಗಳ ವಿರುದ್ಧ ಸೂಕ್ತ ಸಮಯದಲ್ಲೇ ಕ್ರಮ ಕೈಗೊಂಡಿದ್ದರೆ, ಇಂತಹ ವಿಕೃತಿಗಳಿಗೆ ಕಡಿವಾಣ ಬೀಳುತ್ತಿತ್ತು ಎಂದು ಜನರು ಅಭಿಪ್ರಾಯಿಸುತ್ತಾರೆ.