ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿ ಬನ್ನಿ: ಐಎಂಎ ಮಾಲಕ ಮನ್ಸೂರ್ ಖಾನ್ಗೆ ಸಚಿವ ಝಮೀರ್ ಮನವಿ
ಬೆಂಗಳೂರು, ಜೂ. 12: ‘ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿ ಬನ್ನಿ. ಬಡವರ ಹಣ ನೀಡಿ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಝಮೀರ್ ಅಹ್ಮದ್ ಖಾನ್, ಐಎಂಎ ಜ್ಯುವೆಲ್ಸ್ ಸಂಸ್ಥೆಯ ಮಾಲಕ ಮನ್ಸೂರ್ ಖಾನ್ಗೆ ಮನವಿ ಮಾಡಿದ್ದಾರೆ.
ಬುಧವಾರ ಟ್ವಿಟ್ಟರ್ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಚಿವ ಝಮೀರ್ ಅಹ್ಮದ್ ಖಾನ್, ‘ಈಗ ಆಗಿರುವುದು ಆಗಿಹೋಗಿದೆ. ಆದರೆ ದಯವಿಟ್ಟು ನೀವು ತಲೆ ಮರೆಸಿಕೊಳ್ಳುವ ಅಗತ್ಯವಿಲ್ಲ. ಧೈರ್ಯವಾಗಿ ಮುಂದೆ ಬನ್ನಿ, ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ಸಂಸ್ಥೆ ಕಾನೂನು ಬದ್ಧವಾಗಿದ್ದರೆ, ಬನ್ನಿ ಬಡವರ ಹಣ ನೀಡಿ. ನಿಮಗೆ ನಾವು ಬೆಂಬಲ ನೀಡುತ್ತೇವೆ’ ಎಂದು ಕೋರಿದ್ದಾರೆ.
‘ನೀವು ರಾಜಕಾರಣಗಳಿಗೆ ಹಣ ನೀಡಿದ್ದೇನೆಂದು ಹೇಳಿದ್ದೀರಿ. ಆದರೆ, ರಾಜಕಾರಣಗಳಿಗೇಕೆ ಹಣ ನೀಡಬೇಕು. ಅದು ಬಡವರ ಹಣವನ್ನು ನೀವೇಕೆ ಅವರಿಗೆ ನೀಡಿದ್ದೀರಿ. ನಿಮ್ಮ ಸಂಸ್ಥೆ ಕಾನೂನು ಬಾಹಿರವಾಗಿಲ್ಲ ಎಂದರೆ ನೀವೇಕೆ ರಾಜಕಾರಣಿಗಳಿಗೆ ಹಣ ನೀಡಿದ್ದೀರಿ. ಬನ್ನಿ ಸರಕಾರ ನಿಮಗೆ ಬೆಂಬಲ ನೀಡಲಿದೆ. ಆ ಹಣವನ್ನು ವಸೂಲಿ ಮಾಡಿ ಜನರಿಗೆ ಹಣ ಕೊಡಿಸೋಣ’ ಎಂದು ಹೇಳಿದ್ದಾರೆ.