ಸಮಾಜಕ್ಕೆ ಕೊಡುಗೆ ನೀಡುವ ಬಗ್ಗೆ ಯೋಚಿಸಿ: ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾವತಿ
ಕೆಜೆಎ ಶತಮಾನೋತ್ಸವ ಸಮಾರಂಭ
ಬೆಂಗಳೂರು, ಜೂ.16: ಸಮಾಜದಲ್ಲಿ ಉತ್ತಮ ಗುಣವುಳ್ಳ ಮತ್ತು ಒಳ್ಳೆಯ ಮೌಲ್ಯಗಳನ್ನು ಹುಟ್ಟುಹಾಕುವ ಜನರ ಅಗತ್ಯತೆ ಇದ್ದು, ನಾವು ಸದಾ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾವತಿ ಅಭಿಪ್ರಾಯಪಟ್ಟರು.
ರವಿವಾರ ನಗರದ ಜೈನ ಭವನದಲ್ಲಿ ಕರ್ನಾಟಕ ಜೈನ ಅಸೋಸಿಯೇಷನ್(ಕೆಜೆಎ) ಆಯೋಜಿಸಿದ್ದ, ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜ ನನಗೆ ಏನು ಕೊಟ್ಟಿದೆ ಎಂಬುದರ ಬದಲು ಸಮಾಜಕ್ಕೆ ನಾನು ಏನು ಕೊಟ್ಟಿದ್ದೇನೆ ಎಂಬುದರ ಬಗ್ಗೆ ಯೋಚಿಸಬೇಕು ಎಂದರು.
ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ರಾಜೇಂದ್ರಬಾಬು ಮಾತನಾಡಿ, ಕರ್ನಾಟಕ ಇತಿಹಾಸವನ್ನು ನೋಡಿದರೆ ಕದಂಬ, ಗಂಗಾ ಮತ್ತು ಹೊಯ್ಸಳ ಕಾಲದಲ್ಲಿ ಜೈನರು ಇದ್ದರು. ಅಲ್ಲದೆ, ಆದಿಕವಿ ಪಂಪ, ರನ್ನ, ಜನ್ನರಂತಹ ಮಹಾನ್ ಕವಿಗಳು ಜನರಲ್ಲಿ ಹೃದಯದಲ್ಲಿ ಹಾಸು ಹೊಕ್ಕಿದ್ದಾರೆ. ವಾಣಿಜ್ಯ ಮತ್ತು ಶಿಕ್ಷಣ ಸೇರಿ ಎಲ್ಲ ಕ್ಷೇತ್ರದಲ್ಲಿ ಜೈನರು ಮುಂದುವರಿದಿದ್ದಾರೆ ಎಂದು ನುಡಿದರು.
ಸಮಾರಂಭದಲ್ಲಿ ಎಂ.ಎಲ್.ವರ್ಧಮಾನಯ್ಯ ಮತ್ತು ಮೋತೀಖಾನೆ ಪದ್ಮನಾಭಯ್ಯ ಅವರ ತೈಲಚಿತ್ರ, ಶತ ಸಂಭ್ರಮ ಹಾಗೂ ವಿಶ್ವಬಂಧು ಸ್ಮರಣ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು. ಸಾಹಿತಿ ಹಂಪಾ ನಾಗರಾಜಯ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ, ಸ್ವಸ್ತಿಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ, ಕೆಜೆಎ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ಗೌರವಾಧ್ಯಕ್ಷ ಸುರೇಂದ್ರ ಕುಮಾರ್, ಕಾರ್ಯಾಧ್ಯಕ್ಷ ಪಿ.ವೈ.ರಾಜೇಂದ್ರ ಕುಮಾರ್ ಸೇರಿದಂತೆ ಪ್ರಮುಖರಿದ್ದರು.