ಜಿಂದಾಲ್ ಪರ ವಕಾಲತ್ತು ವಹಿಸಿದ ಎಫ್ಕೆಸಿಸಿಐ
ಕೆ.ಸುಧಾಕರ್ ಎಸ್.ಶೆಟ್ಟಿ
ಬೆಂಗಳೂರು, ಜೂ.17: ಜಿಂದಾಲ್ಗೆ ರಾಜ್ಯ ಸರಕಾರ ನೀಡಿದ್ದ ಗುತ್ತಿಗೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾನೂನಿನ ಪ್ರಕಾರ ಆ ಸಂಸ್ಥೆಗೆ ಭೂಮಿ ಮಾರಾಟ ಮಾಡಿರುವುದನ್ನು ಬದಲಿಸಬಾರದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಅಧ್ಯಕ್ಷ ಕೆ.ಸುಧಾಕರ್ಎಸ್.ಶೆಟ್ಟಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ನ ಗುತ್ತಿಗೆ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಆ ಸಂಸ್ಥೆಗೆ ಶುದ್ಧ ಕ್ರಯಪತ್ರ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
10 ವರ್ಷಗಳ ಹಿಂದೆ ಜಿಂದಾಲ್ ಸಂಸ್ಥೆಗೆ ಬಳ್ಳಾರಿಯಲ್ಲಿ 3667 ಎಕರೆ ಭೂಮಿಯನ್ನು ಗುತ್ತಿಗೆ ಮತ್ತು ಮಾರಾಟ ಆಧಾರದ ಮೇಲೆ ನೀಡಲಾಗಿತ್ತು. ಈ ವಿಚಾರ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರಿಗೂ ತಿಳಿದಿದೆ. ಆದರೆ, ಈ ವಿಚಾರದಲ್ಲಿ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಇದು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಜಿಂದಾಲ್ಗೆ ಭೂಮಿ ನೀಡುವ ಸಂಬಂಧ ಉಂಟಾದ ಗೊಂದಲಗಳ ನಂತರ ಎಫ್ಕೆಸಿಸಿಐ ಸಂಸ್ಥೆಯಿಂದ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಕಳೆದ ವಾರ ಈ ಸಮಿತಿಯು ಬಳ್ಳಾರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಅಲ್ಲಿ 6800 ಕೋಟಿ ಬಂಡವಾಳ ಹೂಡಿಕೆ ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ, ಈ ವಿಚಾರದಲ್ಲಿ ಸರಕಾರ ಹಾಗೂ ವಿಪಕ್ಷಗಳು ವಾದ-ವಿವಾದ ನಡೆಸುತ್ತಿರುವುದು ಸರಿಯಲ್ಲ ಎಂದರು.